ಬೆಂಕಿ ಆಕಸ್ಮಿಕಗಳಿಂದ ಉಂಟಾದ ಆಸ್ತಿಪಾಸ್ತಿ, ಪ್ರಾಣ ಹಾನಿಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ವಯಿಸುವುದು ಸೂಕ್ತ
ವಿಜಯ ದರ್ಪಣ ನ್ಯೂಸ್….
ಬೆಂಕಿ ಆಕಸ್ಮಿಕಗಳಿಂದ ಉಂಟಾದ ಆಸ್ತಿಪಾಸ್ತಿ, ಪ್ರಾಣ ಹಾನಿಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ವಯಿಸುವುದು ಸೂಕ್ತ

ಶಿಡ್ಲಘಟ್ಟ : ಬೆಂಕಿ ಆಕಸ್ಮಿಕಗಳಿಂದ ಉಂಟಾದ ಆಸ್ತಿಪಾಸ್ತಿ, ಬೆಲೆಬಾಳುವ ಪದಾರ್ಥಗಳು, ದಾಖಲೆಗಳು ನಾಶವಾಗುವ ಜತೆಗೆ ಪ್ರಾಣ ಹಾನಿಗಳು ಸಂಭವಿಸುತ್ತವೆ ಆದ್ದರಿಂದ ಬೆಂಕಿ ಆಕಸ್ಮಿಕಗಳ ಸಂದರ್ಭದಲ್ಲಿ ನಮ್ಮ ಸೇವೆ ಪಡೆಯುವುದು ಒಂದು ಭಾಗವಾದರೆ ಮುನ್ನೆಚ್ಚರಿಕೆ ಕ್ರಮಗಳು ಹೆಚ್ಚಿನ ಪರಿಣಾಮಕಾರಿಯಾಗಲಿವೆ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿ ಮುನಿಕೃಷ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಕಿ ನಂದಿಸುವ ಮತ್ತು ಬೆಂಕಿಯಿಂದ ಉಂಟಾಗುವ ಪರಿಣಾಮಗಳ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು. ಮನೆ, ಮಳಿಗೆ, ವಾಣಿಜ್ಯ ಸಂಕೀರ್ಣ ಹೀಗೆ ಮಾನವ ಜೀವನ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆಗಳಿರುವ ಎಲ್ಲಾ ಕಡೆಗಳಲ್ಲೂ ಬೆಂಕಿ ಆಕಸ್ಮಿಕಗಳು ಸಂಭವಿಸುವ ಸಾಧ್ಯತೆ ಇರುತ್ತದೆ ,ಇಂತಹ ಆಕಸ್ಮಿಕಗಳು ಸಂಭವಿಸಿದಾಗ ಅಗ್ನಿಶಾಮಕ ಉಪಕರಣಗಳ ಬಳಕೆ ಬಗ್ಗೆ ತಿಳಿಸಿಕೊಟ್ಟರು, ಪ್ರತಿ ಕಟ್ಟಡಗಳಲ್ಲಿ ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಇರುವಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಅಧಿಕಾರಿಗಳಾದ ರಕ್ಷಿತ್,ಅಶೋಕ್, ಸಂದೀಪ್, ಗಣೇಶ, ಶಾಲೆಯ ಮುಖ್ಯೋಪಾಧ್ಯಾಯ ಎಸ್. ಶಿವಶಂಕರ್, ಶಿಕ್ಷಕರಾದ ಶಿವಕುಮಾರ್, ಪಲ್ಲವಿ, ಶ್ರೀನಿವಾಸ್,ಬೀರಪ್ಪ, ಅಪೂರ್ವ ಮುಂತಾದವರು ಹಾಜರಿದ್ದರು.
#################################
ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ಟಿ.ಟಿ.ನರಸಿಂಹಪ್ಪ , ಸುಂದರಾಚಾರಿ ಆಟಗಾರರಾಗಿ ಆಯ್ಕೆ

ಶಿಡ್ಲಘಟ್ಟ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸುತ್ತಿರುವ ಅಖಿಲ ಭಾರತ ಸೇವಾ ಕೇರಂ ಪಂದ್ಯಾವಳಿಗೆ ನಗರದ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯ ತಂತ್ರಜ್ಞ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಮತ್ತು ತಾಲ್ಲೂಕಿನ ಕಂಬದಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಂದರಾಚಾರಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಫೆಬ್ರುವರಿ 17 ರಿಂದ 24 ರವರೆಗೆ ನಡೆಯಲಿರುವ ಕೇರಂ ಪಂದ್ಯಾವಳಿಯಲ್ಲಿ 6 ಮಂದಿ ಪುರುಷರ ತಂಡ ಮತ್ತು 6 ಮಂದಿ ಮಹಿಳೆಯರ ತಂಡ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು 12 ಮಂದಿಯ ತಂಡಕ್ಕೆ ಶಿಡ್ಲಘಟ್ಟದ ಟಿ.ಟಿ.ನರಸಿಂಹಪ್ಪ ತರಬೇತುದಾರರಾಗಿ ಆಯ್ಕೆಯಾಗಿದ್ದು, ಅವರೊಂದಿಗೆ ಒಬ್ಬರು ವ್ಯವಸ್ಥಾಪಕ ಜೊತೆಗಿರುವರು.
ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ,ನಮ್ಮ ರಾಜ್ಯವನ್ನು ಕೇರಂ ಪಂದ್ಯದಲ್ಲಿ ಪ್ರತಿನಿಧಿಸುತ್ತಿರುವ ತಂಡದಲ್ಲಿ ಇಬ್ಬರು ಶಿಡ್ಲಘಟ್ಟದವರು ಇರುವುದು ನಮಗೆ ಹೆಮ್ಮೆ, ತರಬೇತುದಾರರಾಗಿ ಟಿ.ಟಿ.ನರಸಿಂಹಪ್ಪ ಮತ್ತು ಆಟಗಾರರಾಗಿ ಸುಂದರಾಚಾರಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಸಂಘದಿಂದ ನಡೆದ ಸ್ಪರ್ಧೆಯಲ್ಲಿ ಇವರು ವಿಜೇತರಾಗಿದ್ದರು. ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಶಿಡ್ಲಘಟ್ಟ ತಾಲ್ಲೂಕಿಗೆ ಇವರು ಕೀರ್ತಿ ತರುವುದಲ್ಲದೆ, ಇವರುಗಳು ಇತರರಿಗೆ ತರಬೇತಿ ನೀಡುವ ಮೂಲಕ ತಾಲ್ಲೂಕಿನಲ್ಲಿ ಕೇರಂ ಆಟದ ಪ್ರತಿಭೆಗಳ ಹುಟ್ಟಿಗೆ ಕಾರಣರಾಗಬೇಕು ಎಂದು ಅವರಲ್ಲಿ ಮನವಿ ಮಾಡಿದರು.
