ವಿಜಯ ದರ್ಪಣ ನ್ಯೂಸ್…..
ಬಜೆಟ್ನಿಂದ ಸಾಲದ ಬರೆ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿ ದಾಖಲೆ ಬರೆದ ಸಂಭ್ರಮದಲ್ಲಿದ್ದರೆ, ರಾಜ್ಯದ ಜನತೆ ಮಾತ್ರ ಸರ್ಕಾರದ ಆರ್ಥಿಕ ಅವಿವೇಕದಿಂದ ‘ಸಾಲದ ಬರೆ’ ಎಳೆಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ಆಯವ್ಯಯವನ್ನು “ಸುದೀರ್ಘ ಪ್ರಲಾಪ’ ಎಂದು ಕರೆದಿದ್ದಾರೆ.
ಹಳಿ ತಪ್ಪಿದ ಆರ್ಥಿಕತೆ
“ಕರ್ನಾಟಕದ ಆರ್ಥಿಕತೆ ತೀವ್ರ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ ಮತ್ತು ರಿಸರ್ವ್ ಬ್ಯಾಂಕ್ ನೀಡಿರುವ ಎಚ್ಚರಿಕೆಗಳಿಗಿಂತಲೂ ದೊಡ್ಡ ಆರ್ಥಿಕ ಅಪಾಯಕ್ಕೆ ರಾಜ್ಯ ಸಿಲುಕಿದೆ. ಮುಂದಿನ ದಿನಗಳು ಇನ್ನೂ ದುರ್ಬರವಾಗಲಿವೆ. ಇಂತಹ ಧಾರುಣ ಬಜೆಟ್ ನೀಡಿದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸುವುದಿಲ್ಲ.’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಲದ ಸುಳಿಗೆ ಸಿಲುಕಿದ ರಾಜ್ಯ
ಬಜೆಟ್ನಲ್ಲಿನ ಸಾಲದ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ, “ರಾಜ್ಯದ ಒಟ್ಟು ಸಾಲ ಈಗ 8.24 ಲಕ್ಷ ಕೋಟಿ ರೂ.ಗೆ ತಲುಪಿದೆ. ಮುಂದಿನ ವರ್ಷಕ್ಕೆ ಇದು 9 ಲಕ್ಷ ಕೋಟಿ ರೂ. ಮೀರುವುದು ಗ್ಯಾರಂಟಿ. ಸರ್ಕಾರ ಮಾಡುತ್ತಿರುವ ಈ ‘ಸಾಲದ ಗ್ಯಾರಂಟಿ’ ಭೀತಿ ಹುಟ್ಟಿಸುತ್ತಿದೆ. ಬಜೆಟ್ ಪುಸ್ತಕವೇ ಸರ್ಕಾರದ ಲೆಕ್ಕಾಚಾರ ಹಳಿತಪ್ಪಿರುವುದಕ್ಕೆ ಸಾಕ್ಷಿ ನುಡಿಯುತ್ತಿದೆ,” ಎಂದರು.
ಅನುತ್ಪಾದಕ ವೆಚ್ಚಕ್ಕೆ ಸಾಲದ ಹಣ
“ಸರ್ಕಾರ ಸಾಲ ಮಾಡುತ್ತಿದೆ, ಸರಿ. ಆದರೆ ಆ ಹಣ ಎಲ್ಲಿಗೆ ಹೋಗುತ್ತಿದೆ? ಬಂಡವಾಳ ವೆಚ್ಚ ಕಳೆದ ಮೂರು ವರ್ಷಗಳಿಂದ ಒಂದೇ ಕಡೆ ನಿಂತಿದೆ. ಸಾಲದ ದುಡ್ಡಿನಲ್ಲಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ಸಾಕಲಾಗುತ್ತಿದೆ. ಈ ಸರ್ಕಾರವು ಕಾಂಗ್ರೆಸ್ ಕಾರ್ಯಕರ್ತರಿಗೆ ‘ಗಂಜಿ ಕೇಂದ್ರ’ವಾಗಿ ಬದಲಾಗಿದೆ. ಜನರ ತೆರಿಗೆ ಹಣ ಮತ್ತು ಸಾಲದ ದುಡ್ಡು ಅನುತ್ಪಾದಕ ವೆಚ್ಚಕ್ಕೆ ಪೋಲಾಗುತ್ತಿದೆ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಕೇಂದ್ರದ ನಿಂದನೆ ಅನಿವಾರ್ಯವಿರಲಿಲ್ಲ
ಬಜೆಟ್ ಭಾಷಣದಲ್ಲಿ ಕೇಂದ್ರದ ವಿರುದ್ದದ ಟೀಕೆಗಳನ್ನು ಪ್ರಸ್ತಾಪಿಸಿದ ಅವರು, “16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಶೇ.3.61ರಿಂದ ಶೇ.4.7ಕ್ಕೆ ಏರಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 11,000 ಕೋಟಿ ರೂ. ಹರಿದುಬರುತ್ತಿದೆ. ಕೇಂದ್ರದಿಂದ ಹಣ ಬರುವುದು ಕಡಿಮೆಯಾಗಿಲ್ಲ ಎಂದು ಅವರ ಬಜೆಟ್ ಪುಸ್ತಕವೇ ಹೇಳುತ್ತಿರುವಾಗ, ಕೇಂದ್ರವನ್ನು ನಿಂದಿಸುವುದು ಕೇವಲ ಆತ್ಮರತಿಗಾಗಿ ಮಾಡಿದ ಕೆಲಸ.” ಎಂದು ವ್ಯಂಗ್ಯವಾಡಿದ್ದಾರೆ





