ವಿಜಯ ದರ್ಪಣ ನ್ಯೂಸ್…..
ಸ್ವಾಮೀಜಿಗಳು ಆದರ್ಶವಾಗಿರಬೇಕು, ಭಕ್ತರು ಅ ಆದರ್ಶದಿಂದ ಪ್ರೇರಣೆ ಪಡೆಯಬೇಕು

ಚಿಕ್ಕಮಗಳೂರು ಜೂ 15, ಕಡೂರು ತಾಲೂಕಿನ ಹುಲೀಕೆರೆಯ ದೊಡ್ಡ ಮಠದಲ್ಲಿ ಶ್ರೀ ವಿರೂಪಾಕ್ಷಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ 81ನೇ ಜನ್ಮದಿನದ ಸಹಸ್ರ ಚಂದ್ರ ದರ್ಶನ ವರ್ಧಂತಿ, ಕಿರಿಯ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 3 ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ವಿವಿಧ ಮಠಾಧೀಶರು ಮತ್ತು ನೂರಾರು ಭಕ್ತರ ನಡುವೆ ಭಾನುವಾರ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ನಾಡಿನ ವಿವಿಧ ಭಾಗದಿಂದ ಆಗಮಿಸಿದ ಸುಮಾರು 11ಕ್ಕೂ ಹೆಚ್ಚು ಮಠಾಧೀಶರು ಹಾಜರಿದ್ದು ಹುಲಿಕೆರೆ ದೊಡ್ಡಮಠದ ಉಬಯ ಶ್ರೀಗಳಿಗೆ ಅಭಿನಂದಿಸಿ, ಶುಭ ಹಾರೈಸಿದರು.
ಇದೇ ವೇಳೆ ಮಠದ ಹಿಂದಿನ ಗುರುಗಳಾದ ಲಿಂ. ಶ್ರೀ ಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯ ಸ್ಮರಣಾರಾಧನೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹುಲೀಕೆರೆ ಮಠದ ಹಿರಿಯ ಶ್ರೀ ವಿರೂಪಾಕ್ಷಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು 81 ವರ್ಷಗಳ ಕಾಲ ನಿರಂತರವಾಗಿ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ, ಸಾವಿರ ಪೂರ್ಣ ಹುಣ್ಣಿಮೆಯ ಚಂದ್ರನ ದರ್ಶನವನ್ನು ಮಾಡಿರುವ ಅವರು ನಮ್ಮ ನಡುವೆ ಇರುವುದೇ ನಮ್ಮ ಸೌಭಾಗ್ಯ ಎಂದರು.
ಕಿರಿಯ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಬರೆದಿರುವ ಮೌಕ್ತಿಕ ಶುಕ್ತಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ ವೀರಶೈವ, ಲಿಂಗಾಯತ ಮಠಗಳು ಸರ್ಕಾರಕ್ಕೆ ಸಮನಾಗಿ ಜ್ಞಾನ ದಾಸೋಹ, ಅನ್ನದಾಸೋಹ ನಡೆಸುತ್ತಿವೆ ಎಂದು ಹೇಳಿದರು.
ಫಲಾಹಾರಸ್ವಾಮಿ ಮಠದ ಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹುಲೀಕೆರೆ ಮಠದ ಹಿರಿಯ ಶ್ರೀಗಳು ತಪಸ್ವಿಗಳು ಮತ್ತು ಮಹಾಸಾಧಕರಾಗಿದ್ದಾರೆ ಹಾಗೂ ಕಿರಿಯ ಶ್ರೀಗಳು ಜ್ಞಾನದ ಭಂಡಾರವಾಗಿದ್ದಾರೆ ಎಂದು ತಿಳಿಸಿದರು.
ಹಿರಿಯಶ್ರೀ ವಿರೂಪಾಕ್ಷಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಹುಲೀಕೆರೆ ಮಠದ ಅಭಿವೃದ್ಧಿಗೆ, ಜೀರ್ಣೋದ್ಧಾರಕ್ಕೆ ಭಕ್ತರು ಸಹಕರಿಸಬೇಕು ಎಂದು ಹೇಳಿದರು.
ಕಿರಿಯಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವೀರಾಪುರ ಹಿರೇಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದಾಗಿ ಮೌಕ್ತಿಕ ಶುಕ್ತಿ ಕೃತಿಯನ್ನು ಬರೆಯಲು ತಮಗೆ ಸಾಧ್ಯವಾಯಿತು ಎಂದು ತಿಳಿಸಿದರು.
ಪ್ರಧಾನ ಉಪನ್ಯಾಸ ನೀಡಿದ ಬರಹಗಾರ ಡಿ.ಎಂ.ಮಂಜುನಾಥಸ್ವಾಮಿ ಅತ್ಯಂತ ಸಂಕಷ್ಟದ ಕಾಲದಲ್ಲೂ ಈ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿರುವ ಹುಲೀಕೆರೆ ದೊಡ್ಡ ಮಠವು ಕೋಮು ಸೌಹಾರ್ದತೆಗೆ ಹೆಸರಾಗಿದೆ, ಕೋಮು ಸೌಹಾರ್ದತೆ ಎಂಬುದು ಕೇವಲ ಆದರ್ಶವಲ್ಲ ಅದು ರಾಷ್ಟ್ರದ ಬಲವು ಹೌದು, ಇಂತಹ ಸಾಮರಸ್ಯಕ್ಕೆ ಹೆಸರಾಗಿರುವ ಹುಲಿಕೆರೆ ದೊಡ್ಡಮಠದ ಅಭಿವೃದ್ಧಿಗೆ ಮತ್ತು ಜೀರ್ಣೋದ್ಧಾರಕ್ಕೆ ಭಕ್ತರು ಮುಂದಾಗಬೇಕು, ಯುವಜನತೆ ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರೂ ಆಗಬೇಕು ಎಂದು ಸಲಹೆ ಮಾಡಿದರು.
ಬೀರೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿ ಕೇಂದ್ರ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಣ್ಣೇ ಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ನಂದೀಪುರದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ತರೀಕೆರೆಯ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಹೆಚ್.ಸಿ. ಕಲ್ಮರುಡಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ.ನಿಶಾಂತ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಪ್ರಭುಲಿಂಗ ಶಾಸ್ತ್ರಿ, ವೀರಶೈವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಓಂಕಾರಸ್ವಾಮಿ, ಸಮಾಜದ ಮುಖಂಡರಾದ ಮುಂಡ್ರೆ ಗಿರಿರಾಜ್, ಮುಗುಳುವಳಿ ವಿಜಯ್ ಕುಮಾರ್,ಎಂ ಸಿ ರುದ್ರೇಶ್ ಪ್ರಾಚಾರ್ಯ ಪಿ.ಚಂದ್ರಮೌಳಿ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕ ಜಗದೀಶ್ ಕಾರ್ಯಕ್ರಮ ನಿರೂಪಣೆ ಮಾಡಿ , ನಿವೃತ್ತ ಶಿಕ್ಷಕರಾದ ಮಹಾಲಿಂಗಯ್ಯ ಸ್ವಾಗತಿಸಿ ಮಲ್ಲೇಶಪ್ಪ ವಂದಿಸಿದರು.
••••••••••••
ನ್ಯೂಸ್ ಕಿಂಗ್… ✍️
ಚಿಕ್ಕಮಗಳೂರು







