ವಿಜಯ ದರ್ಪಣ ನ್ಯೂಸ್….
ಮನೆಗಳ್ಳತನ ಆಂಧ್ರದ ಕುಖ್ಯಾತ ಕಳ್ಳ ಖೆಡ್ಡಾಕ್ಕೆ ,2 ಲಕ್ಷ 80 ಸಾವಿರ ರೂ.ಗಳ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ!

ಶಿಡ್ಲಘಟ್ಟ : ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ಅಂತರರಾಜ್ಯ ಮನೆಗಳ್ಳನೊಬ್ಬನನ್ನು ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನಿವಾಸಿ ಜಿ.ರಾಮಕೃಷ್ಣ (60) ಬಂಧಿತ ಆರೋಪಿ. ಬಂಧಿತನಿಂದ ಬರೋಬ್ಬರಿ 2.80 ಲಕ್ಷ ರೂಪಾಯಿ ಮೌಲ್ಯದ 24 ಗ್ರಾಂ ಚಿನ್ನದ ಆಭರಣ ಹಾಗೂ 400 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಚಿಂತಾಮಣಿ ಬೈಪಾಸ್ ರಸ್ತೆಯ ನಿವಾಸಿ, ಹೋಟೆಲ್ ಉದ್ಯಮಿ ಶ್ರೀನಾಥ್ ಎಂಬುವರ ಮನೆಯಲ್ಲಿ ಜುಲೈ 22ರಂದು ಬೆಳಗಿನ ಜಾವ ಕಳ್ಳತನ ನಡೆದಿತ್ತು. ಮನೆಯ ಬೀರುವಿನಲ್ಲಿದ್ದ ಚಿನ್ನ-ಬೆಳ್ಳಿ ಆಭರಣ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಿದ್ದರು, ಕೃತ್ಯ ನಡೆದ ಕೇವಲ ಒಂದೇ ವಾರದಲ್ಲಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ,
ಬಂಧಿತ ರಾಮಕೃಷ್ಣ ಹಳೆಯ ಕುಖ್ಯಾತ ಕಳ್ಳನಾಗಿದ್ದು, ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಈಗಾಗಲೇ 11 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.










