ವಿಜಯ ದರ್ಪಣ ನ್ಯೂಸ್…
ಮಳೆಗಾಗಿ ದೇವರಮಳ್ಳೂರಿನಲ್ಲಿ ಮಳೆರಾಯನ ಪೂಜೆ

ಶಿಡ್ಲಘಟ್ಟ : ಮಳೆಗಾಲ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಸುಮಂಗಲಿ ಮಹಿಳೆಯರು ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಹಿರಿಯರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಯನ್ನು ಮಹಿಳೆಯರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಗ್ರಾಮದ ನಡು ರಸ್ತೆಯಲ್ಲಿ ಮಳೆರಾಯನ ಚಿತ್ರದ ರಂಗೋಲಿ ಬಿಡಿಸಿ, ಕಳಸ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ ಕಳಸದ ಸುತ್ತ ಐದು ರಾಗಿ ರೊಟ್ಟಿಗಳನ್ನು ಇಟ್ಟು, ಇಚ್ಚೀಚೆಗೆ ಸಂಜೆ ಆರಂಭಿಸಿ ರಾತ್ರಿ 10 ಗಂಟೆಯವರೆಗೆ ಮಳೆರಾಯನ ಶೋಭಾನೆ ಪದಗಳನ್ನು ಹಾಡಿ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ.
ಬಳಿಕ ಕಳಸವನ್ನು ಗ್ರಾಮದ ಶ್ರೀಮಳ್ಳೂರಾಂಬದೇವಿಯ ಕೆರೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಐದು ರೊಟ್ಟಿಗಳ ಪೈಕಿ ಮೂರು ರೊಟ್ಟಿಗಳನ್ನು ಕೆರೆಗೆ ಅರ್ಪಿಸಿ, ಉಳಿದ ಎರಡು ರೊಟ್ಟಿಗಳನ್ನು ಪ್ರಸಾದವಾಗಿ ಸೇವಿಸುವುದು ಇಲ್ಲಿನ ಸಂಪ್ರದಾಯ.
ಐದು ದಿನಗಳ ಪೂಜಾ ಕೈಂಕರ್ಯ ಪೂರ್ಣಗೊಂಡ ಬಳಿಕ ಗಂಡು ಮಗುವಿಗೆ ಹೆಣ್ಣಿನ ವೇಷ ತೊಡಿಸಿ, ಮಳೆರಾಯನ ಪ್ರತಿರೂಪವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ವೇಷಧಾರಿ ಮಗುವಿನ ಮೇಲೆ ನೀರು ಹಾಕಿ ಪೂಜೆ ಸಲ್ಲಿಸಿದ ಬಳಿಕ ಕೆರೆಯಲ್ಲಿ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ ಈ ವೇಳೆ ಮಳೆರಾಯನನ್ನು ಒಲಿಸಿಕೊಳ್ಳುವ ನಂಬಿಕೆಯೊಂದಿಗೆ ಕತ್ತೆಗಳ ಮದುವೆ ಮಾಡಿಸುವ ವಿಶಿಷ್ಟ ಆಚರಣೆಯನ್ನೂ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ನಂತರ ಗ್ರಾಮಸ್ಥರಿಗೆ ಸಿಹಿ ಹಂಚುವ ಮೂಲಕ ಪೂಜಾ ಕಾರ್ಯಕ್ರಮಗಳಲ್ಲಿ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.











