ವಿಜಯ ದರ್ಪಣ ನ್ಯೂಸ್…..
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಮಕ್ಕಳ ಕಲಿಕೆಗೆ ಉತ್ತೇಜನ :ಬೆಸ್ಟ್’ ಸಂಸ್ಥೆಯ
ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ

ಶಿಡ್ಲಘಟ್ಟ : ಶೈಕ್ಷಣಿಕ ಮಾರ್ಗದರ್ಶನ, ವಿಜ್ಞಾನ ವಿಷಯಗಳ ಸ್ಟೈಡ್ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮಗಳು, ಗಿಡ ನೆಡುವಿಕೆ ಹಾಗೂ ಪರಿಸರ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಸ್ಟ್” (ಬೆಟರ್ ಎನ್ವೆರ್ನಮೆಂಟ್ ಫಾರ್ ಸೋಷಿಯಲ್ ಟ್ರಾನ್ಸ್ಫರ್ಮೇಶನ್) ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಸಿ.ವಿ. ಲೋಕೇಶ್ ಗೌಡ ತಿಳಿಸಿದರು.
“ಬೆಸ್ಟ್” (ಬೆಟರ್ ಎನ್ವೆರ್ನಮೆಂಟ್ ಫಾರ್ ಸೋಷಿಯಲ್ ಟ್ರಾನ್ಸ್ಫರ್ಮೇಶನ್) ಫೌಂಡೇಶನ್ ಸಂಸ್ಥೆಯ ಪ್ರಾರಂಭೋತ್ಸವದ ಅಂಗವಾಗಿ ತಾಲ್ಲೂಕಿನ ಸಾದಲಿ ಹೋಬಳಿಯ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ವಿತರಿಸಿ
ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವುದು ಹಾಗೂ ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಬಲ ತುಂಬುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಮುಂದಿನ ದಿನಗಳಲ್ಲಿ ಸೇವಾ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಇದೆ ಎಂದು ಹೇಳಿದರು.
ಸಮಾನ ಮನಸ್ಕರು ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಹೊಂದಿರುವ ಪ್ರತಿಯೊಬ್ಬರಿಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ಮನವಿ ಮಾಡಿದರು.
‘ಬೆಸ್ಟ್’ ಸಂಸ್ಥೆಯ ಮಾರ್ಗದರ್ಶಕ, ರಸಾಯನಶಾಸ್ತ್ರ ಪ್ರಾಧ್ಯಾಪಕ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಸಿ.ನಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಇನ್ನಷ್ಟು ಮುತುವರ್ಜಿ ವಹಿಸಬೇಕು. ಕಾರ್ಪೊರೇಟ್ ಶಾಲೆಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕಿದೆ ಇದಕ್ಕಾಗಿ ಶಿಕ್ಷಕರಲ್ಲಿ ಸಮರ್ಪಣಾ ಮನೋಭಾವ ಇರಬೇಕು. ಪೋಷಕರೂ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ನಿಜವಾದ ಪ್ರತಿಭೆ ಹಳ್ಳಿಯ ಸರ್ಕಾರಿ ಶಾಲೆಗಳ ಮಕ್ಕಳಲ್ಲಿಯೂ ಅಡಗಿದೆ ಆ ಪ್ರತಿಭೆಯನ್ನು ಗುರ್ತಿಸಿ ಬೆಳೆಸುವ ಕೆಲಸ ನಡೆಯಬೇಕು ನನ್ನ ಶಿಷ್ಯರು ಕೈಗೊಂಡಿರುವ ಈ ಮಹತ್ವದ ಕಾರ್ಯ ಶ್ಲಾಘನೀಯ ಎಂದು ನುಡಿದರು.
ಈ ವೇಳೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ, ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪೂಸಗಾನದೊಡ್ಡಿ ಸರ್ಕಾರಿ ಶಾಲೆಗೆ ಧ್ವನಿವರ್ಧಕ ವ್ಯವಸ್ಥೆ, ಇರಗಪ್ಪನಹಳ್ಳಿ ಸರ್ಕಾರಿ ಶಾಲೆಗೆ ಕಲರ್ ವೈ-ಫೈ ಪ್ರಿಂಟರ್ ಹಾಗೂ ಕೋಟಗಲ್ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳಿಗಾಗಿ ಟ್ರ್ಯಾಕ್ ಸೂಟ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಮಧುಸೂದನ್ ರೆಡ್ಡಿ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಸಾದ್, ಕೃಷಿ ತಜ್ಞ ಹಾಗೂ ವಿದ್ಯಾಸಂಸ್ಥೆಯ ಮುಖಂಡ ಬಾಬುರಾಜ್, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಇ.ಎನ್.ಟಿ ವಿಭಾಗದ ಮುಖ್ಯಸ್ಥ ಡಾ.ಹರ್ಷವರ್ಧನ್, ಅಧ್ಯಾಪಕಿ ಪರಿಮಳ ವಿಶ್ವನಾಥ್ ಹಾಗೂ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಜಿ. ಮಂಜುನಾಥ್ ಮುಂತಾದವರು ಹಾಜರಿದ್ದರು.









