ವಿಜಯ ದರ್ಪಣ ನ್ಯೂಸ್….
ಸಂಭ್ರಮಕ್ಕೆ ರೈಲು ಸೌಲಭ್ಯ: ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಾರಾಂತ್ಯ ವಿಶೇಷ ರೈಲು

ಚಿಕ್ಕಮಗಳೂರು ಸೆ 17: ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ಮಂಡಳಿ ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 5 ಗಂಟೆಗೆ ಹೊರಡುವ ರೈಲು ಬೆಳಿಗ್ಗೆ 11.15ಕ್ಕೆ ಚಿಕ್ಕಮಗಳೂರು ತಲುಪಲಿದೆ. ಈ ರೈಲು ಕುಂದಗೋಳ, ಸಂಶಿ, ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಅದೇ ರೀತಿ ರೈಲು ಸಂಖ್ಯೆ 07342 ಚಿಕ್ಕಮಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ ರೈಲು ಕೂಡ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಚಿಕ್ಕಮಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 11.20ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ.
ಹಿಂತಿರುಗುವ ಮಾರ್ಗದಲ್ಲಿಯೂ ಕಣಿವೆಹಳ್ಳಿ, ಸಖರಾಯಪಟ್ಟಣ, ಬಿಸ್ಲೆಹಳ್ಳಿ, ಕಡೂರು, ಬೀರೂರು, ಅಜ್ಜಂಪುರ, ರಾಮಗಿರಿ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ, ಸಂಶಿ ಹಾಗೂ ಕುಂದಗೋಳ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
10 ಬೋಗಿಗಳ ರೈಲು:
ಈ ವಿಶೇಷ ರೈಲಿನಲ್ಲಿ ಒಂದು ಸ್ಲೀಪರ್ ಕ್ಲಾಸ್ ಬೋಗಿ, ಏಳು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್/ದಿವ್ಯಾಂಗಜನ ಬೋಗಿಗಳು ಇರಲಿವೆ.
ಹಬ್ಬಗಳ ಸಂದರ್ಭದಲ್ಲಿ ಹುಬ್ಬಳ್ಳಿ–ಚಿಕ್ಕಮಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ವಾರಾಂತ್ಯ ವಿಶೇಷ ರೈಲು ಅನುಕೂಲ ಕಲ್ಪಿಸಲಿದ್ದು, ಚಿಕ್ಕಮಗಳೂರು ಸೇರಿದಂತೆ ಮಾರ್ಗಮಧ್ಯದ ಪಟ್ಟಣಗಳ ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ದೊರೆಯಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಡಿ ಎಂ ಮಂಜುನಾಥಸ್ವಾಮಿ









