ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆಯು ಅಪಾರ:  ಮ.ಸುರೇಶ್‌ಬಾಬು

ವಿಜಯ ದರ್ಪಣ ನ್ಯೂಸ್….

ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆಯು ಅಪಾರ:  ಮ.ಸುರೇಶ್‌ಬಾಬು

ಶಿಡ್ಲಘಟ್ಟ : ಶಿವಶರಣರು ನೀಡಿದ ವಚನಸಾಹಿತ್ಯವು ಅಪರೂಪದ ಮೌಲ್ಯಗಳ ಆಗರವಾಗಿದೆ ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆಯು ಅಪಾರವಾದುದು ಎಂದು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು, ಸಾಕ್ಷಿಮುರುಗನ್ ಸೇವಾ ಟ್ರಸ್ಟ್, ಬಂಗಲೆ ಕುಟುಂಬ ಆಶ್ರಯದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್‌ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಗುವಿನಲ್ಲಿರುವ ಅನಗತ್ಯ ಅಂಶಗಳು, ಕೆಟ್ಟ ಗುಣಗಳನ್ನು ಹೋಗಲಾಡಿಸಿ ಮಗುವಿನಲ್ಲಿ ದೈವತ್ವ ಗುಣವನ್ನು ಮನೆಮಾಡಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದು ಮಗುವಿನ ದಿಸೆಯಲ್ಲಿ ಮಕ್ಕಳು ಅಧ್ಯಯನ ಶೀಲತೆ ಗುಣವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿದಾನಂದ ಬಿರಾದಾರ್ ಮಾತನಾಡಿ ವಚನಸಾಹಿತ್ಯ ಮತ್ತು ದಾಸಸಾಹಿತ್ಯಗಳೆರಡೂ ಅಪೂರ್ವವಾದುವು ವಚನಗಳಲ್ಲಿ ಬದುಕಿನ ಮೌಲ್ಯಗಳಿದ್ದು, ಎಲ್ಲರೂ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಬೇಕಿದೆ ಎಂದರು.

ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ ಸಂಶೋಧನೆ ಮತ್ತು ಮುದ್ರಣ ಕಾರ್ಯಕ್ಕೆ ಮುಂದಾಗದಿದ್ದರೆ ವಚನಸಾಹಿತ್ಯವು ಉಳಿಯುತ್ತಿರಲಿಲ್ಲ. ಸಂಘಸಂಸ್ಥೆಗಳು ಮಾಡುವಷ್ಟು ಉತ್ತಮ ಕಾರ್ಯಗಳನ್ನು ಹಳಕಟ್ಟಿ ಅವರು ಏಕಾಂಗಿಯಾಗಿ ಮಾಡಿ, ಬ್ಯಾಂಕ್ ಸ್ಥಾಪನೆ, ಪ್ರಕಾಶನ, ಸಂಶೋಧನೆಯಂತಹ ಕಾರ್ಯಗಳನ್ನು ಸಾಧಿಸಿದ್ದರು ಎಂದರು.

ಶಿಕ್ಷಕ ಟಿ.ಎಂ.ಮಧು ಉಪನ್ಯಾಸ ನೀಡಿ, ವಚನಸಾಹಿತ್ಯ ಇರುವವರೆವಿಗೂ ಫ.ಗು.ಹಳಕಟ್ಟಿ ಅವರ ಹೆಸರು ಅಜರಾಮರವಾಗಿ ಉಳಿಯಬಲ್ಲದು ಶಿವಶರಣರ ಒಂದೊಂದು ವಚನವೂ ಬದುಕಿನ ಶಿಕ್ಷಣವನ್ನು ನೀಡಬಲ್ಲದು ಎಂದರು.

ಇದೇ ವೇಳೆ ಸಂಭ್ರಮದ ಅಂಗವಾಗಿ ವಚನಗಾಯನ, ಭಾವಗೀತೆ ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು ಹಾಗು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಮುಂತಾದವರು ಹಾಜರಿದ್ದರು.