ತುಮಕೂರು ಸಹಕಾರಿ ಹಾಲು ಒಕ್ಕೂಟದಲ್ಲಿ (ತುಮುಲ್) ನಡೆದಿರುವ ಘಟನೆ ವಿಚಾರಣೆ ನಡೆಸಿ ವರದಿ ನೀಡಲು ಆದೇಶಿಸಲಾಗಿದ್ದು , ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.
ಒಕ್ಕೂಟದ ಅಧಿಕಾರಿಗಳು ಪರೀ ವೀಕ್ಷಣೆ ಸಂದರ್ಭದಲ್ಲಿ ಟ್ಯಾಂಕರ್ ಗಳ ಚಾಲಕರು ಅವ್ಯವಹಾರದಲ್ಲಿ ತೊಡಗಿರುವುದನ್ನು ನೇರವಾಗಿ ಪತ್ತೆ ಮಾಡಿದ್ದಾರೆ. ಮೇ 17ರಂದು ಘಟನೆ ನಡೆದ ದಿನವೇ ಅಧಿಕಾರಿಗಳಿಂದ ವಿವರ ಪಡೆದು, ಮೇ 18ರಂದು ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸು ಜಾರಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಅಧ್ಯಕ್ಷರು ತಿಳಿಸಿದ್ದಾರೆ.
ಕೃತ್ಯ ಜರಗಿದ ತಕ್ಷಣ ಒಕ್ಕೂಟದ ಅಧಿಕಾರಿಗಳು ವಾಹನಗಳನ್ನು ಸುಪರ್ದಿಗೆ ಪಡೆದು ಸದರಿ ಬಿಎಂಸಿಗಳಿಂದ ಸರಬರಾಜಗುವ ಹಾಲನ್ನು ಪ್ರಧಾನ ಡೈರಿಯಲ್ಲಿ ಪರಿವೀಕ್ಷಣೆಗೊಳಪಡಿಸಿದ್ದಾರೆ. ಈ ಕೃತ್ಯದ ಬಗ್ಗೆ ಪೂರ್ಣ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಒಕ್ಕೂಟದಿಂದ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಕ್ಕೂಟವು ಹೈನುಗಾರರ ಹಿತ ಕಾಪಾಡಿಕೊಂಡು ಬರಲಾಗುತ್ತಿದೆ ಯಾವ ರೀತಿಯಿಂದಲೂ ಹೈನುಗಾರರು ನಷ್ಟ ಹೊಂದಲು ಅವಕಾಶ ನೀಡಿರುವುದಿಲ್ಲ, ಒಂದು ಪಕ್ಷ ಅಂತಹ ಸಮಸ್ಯೆಗಳು ಎದುರಾದಲ್ಲಿ ಒಕ್ಕೂಟದಿಂದ ನೇರವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ವಾಹನ ಗುತ್ತಿಗೆದಾರರು ಚಾಲಕರು ಅಥವಾ ಯಾರೇ ಆಗಿದ್ದರು ಅಂತವರ ವಿರುದ್ಧ ಶೀಘ್ರವಾಗಿ ಮುಲಾಜಿಲ್ಲದೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.





