ವಿಜಯ ದರ್ಪಣ ನ್ಯೂಸ್……
ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು : ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್

ಶಿಡ್ಲಘಟ್ಟ : ಶಿಕ್ಷಣ ಪಡೆದವರು ಸಮಾಜದ ಇತರರಿಗೆ ಮಾದರಿಯಾಗಬೇಕು,ಯುವಕರು ದಾರಿ ತಪ್ಪದೆ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆ ಮತ್ತು ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತ ಸಮಯದಾಯದವರು ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸಗಳಿಗೆ ಪ್ರಯತ್ನಿಸಬೇಕು ಕಿವಿಮಾತು ಹೇಳಿದರು.
ಪೋಕ್ಸ್ (POCSO) ಪ್ರಕರಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣಗಳನ್ನು ರಾಜಿ ಮೂಲಕ ಮುಗಿಸಲು ಪ್ರಯತ್ನಿಸಬೇಡಿ ನೊಂದವರಿಗೆ ಕಾನೂನುಬದ್ಧ ನ್ಯಾಯ ಕೊಡಿಸುವುದು ನಮ್ಮೆಲ್ಲರ ಹೊಣೆ ಎಂದು ಎಚ್ಚರಿಸಿದರು.
ಪಿಎಸ್ಐ ಶ್ಯಾಮಲ ಮಾತನಾಡಿ, ಸಾವಿರ ರೂಪಾಯಿ ಹೆಲ್ಮೆಟ್ ಖರೀದಿಸಲು ಹಿಂದೆ ಮುಂದೆ ನೋಡುತ್ತೇವೆ , ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭೈಕ್ ಖರೀದಿಸಲು ಹಿಂದೆ,ಮುಂದೆ ನೋಡಲ್ಲ , ದಂಡ ಕಟ್ಟುವುದಕ್ಕೆ ಹೆದರುತ್ತೀರಾ, ನಿಮ್ಮ ಜೀವದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿದರು. ಹೆಲ್ಮೆಟ್ ಧರಿಸದಿದ್ದರೆ ಬೈಕ್ ಜಪ್ತಿ ಮಾಡುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ದಲಿತ ಮುಖಂಡ ದಡಂಘಟ್ಟ ತಿರುಮಲೇಶ್ ಮಾತನಾಡಿ, ಈ ಭಾಗದಲ್ಲಿ ಹಿಂದೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಿದ್ದವು,ಆದರೆ ಈಗ ಅಧಿಕಾರಿಗಳ ಸಹಕಾರದಿಂದ ಪರಿಸ್ಥಿತಿ ಸುಧಾರಿಸಿದೆ ಇಂತಹ ಸಭೆಗಳು ನಿಯಮಿತವಾಗಿ ನಡೆಯಬೇಕು ಎಂದು ಮನವಿ ಮಾಡಿದರು.







