ಮಕ್ಕಳು ಮೊಬೈಲ್ ಗೆ ದಾಸರಾದರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ: ಪಟ್ಟದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ
ವಿಜಯ ದರ್ಪಣ ನ್ಯೂಸ್……
ಮಕ್ಕಳು ಮೊಬೈಲ್ ಗೆ ದಾಸರಾದರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ: ಪಟ್ಟದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ

ಶಿಡ್ಲಘಟ್ಟ : ಇಂದಿನ ತಲೆಮಾರಿನ ಮಕ್ಕಳಿಗೆ ಅತಿಯಾಗಿ ಮೊಬೈಲ್ ನೀಡುವುದು ಅವರ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟಂತೆ ಮೊಬೈಲ್ಗೆ ದಾಸರಾದರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ ವೀರ ಸಿಂಹಾಸನ ಸಂಸ್ಥಾನ ಬೆಳ್ಳವಿಯ ಪಟ್ಟದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು, ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು, ಜ್ಞಾನದ ದಾರಿಯಲ್ಲಿ ನಡೆಯಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಮಹಿಳೆಯರು ಮನೆಯ ಬೆಳಗುವ ದೀಪದಂತವರು ಭಕ್ತಿ, ಸಂಸ್ಕಾರ ಮತ್ತು ಸತ್ಪವೃತ್ತಿಯ ಹಾದಿಯಲ್ಲಿ ಸಾಗಿದಾಗ ಮಾತ್ರ ಕುಟುಂಬ ಹಾಗೂ ಸಮಾಜ ಸುಭಿಕ್ಷವಾಗಿರಲು ಸಾಧ್ಯ ಎಂದರು.
ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ಜನರಲ್ಲಿ ದೈವಭಕ್ತಿ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಗೊಳಿಸುತ್ತವೆ ಎಂದು ನುಡಿದರು.
ಡಾ.ವೀರೇಂದ್ರ ಹೆಗ್ಗಡೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದರೂ ಆ ರೀತಿಯ ಸಂಕಲ್ಪವಿಲ್ಲ, ಸೇವೆಯೇ ಅವರ ಧೈಯ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ,ದೇಶವು ಅವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳ ಮೂಲಕ ಗೌರವಿಸಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಸಿ.ಎಸ್. ಪ್ರಶಾಂತ್ ಮಾತನಾಡಿ , ಹಿರಿಯರನ್ನು ಗೌರವಿಸುವುದು, ಕಿರಿಯರಿಗೆ ಆಶೀರ್ವದಿಸುವುದು ಮತ್ತು ಸಾತ್ವಿಕ ಜೀವನ ನಡೆಸುವುದೇ ಧರ್ಮ ರಕ್ಷಣೆ. ಇತರ ಧರ್ಮಗಳನ್ನು ದೂಷಿಸದೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಪ್ರಸಾದ್ ,ಗ್ರಾಮದ ಮುಖಂಡರಾದ ಎಂ.ಅಯ್ಯಣ್ಣ, ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಎಂ.ಪಿ.ಸಿ.ಎಸ್. ಕಾರ್ಯದರ್ಶಿ ಶಶಿಕುಮಾರ್, ಮತ್ತು ಹೈನುಗಾರಿಕಾ ಸಹಕಾರ ಸಂಘದ ಪ್ರಶಾಂತ್,ಚರಣ್, ಅನ್ನದಾಸೋಹ ಸಮಿತಿಯ ರಮೇಶ್, ತಾಲೂಕು ಸಮನ್ವಯಾಧಿಕಾರಿ ಅರುಣಾ, ವಲಯ ಮೇಲ್ವಿಚಾರಕರಾದ ಆರ್.ಪಲ್ಲವಿ ಹಾಗೂ ತಂಡದವರು ಪಾಲ್ಗೊಂಡಿದ್ದರು.
