ವಿಜಯ ದರ್ಪಣ ನ್ಯೂಸ್….
ವಿಜ್ಞಾನ ಮತ್ತು ಪ್ರದರ್ಶನದಂತ ಚಟುವಟಿಕೆಗಳು ಶಾಲೆಗಳಲ್ಲಿ ಕಾಲಕಾಲಕ್ಕೆ ನಡೆಯಬೇಕು: ಯು. ವೈ. ಮಂಜುನಾಥ್

ಶಿಡ್ಲಘಟ್ಟ : ವಿಜ್ಞಾನ ವಸ್ತು ಪ್ರದರ್ಶನದಂತ ಚಟುವಟಿಕೆಗಳು ಪ್ರಾಯೋಗಿಕವಾಗಿ ಅನುಭವವನ್ನು ನೀಡುತ್ತವೆ. ಇದು ಪಠ್ಯದ ಅಭ್ಯಾಸಕ್ಕಿಂತಲೂ ಹೆಚ್ಚು ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಶಾಲೆಗಳಲ್ಲಿ ಇಂತಹ ಚಟುವಟಿಕೆಗಳು ಕಾಲ ಕಾಲಕ್ಕೆ ನಡೆಯಬೇಕು
ಎಂದು ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ೧ ರಿಂದ ೪ನೇ ತರಗತಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ’ಲಿಟ್ಲ್ ಮೈಂಡ್ ಬಿಗ್ ಐಡಿಯಾಸ್’-’ಅವಲೋಕನ’ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳು ಮಕ್ಕಳಲ್ಲಿನ ಆಸಕ್ತಿಯನ್ನು ಕೆರಳಿಸುವ, ಆಸಕ್ತಿ ಇನ್ನಷ್ಟು ಹೆಚ್ಚಿಸುವಂತಿರಬೇಕು ಇದರಿಂದ ಮಕ್ಕಳಲ್ಲಿ ಕ್ರೀಯಾಶೀಲತೆ ಬೆಳೆಯಲಿದೆ ಎಂದು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಪಠ್ಯ ಅಥವಾ ಪಠ್ಯೇತರ ಚಟುವಟಿಕೆಗಳು ಕೇವಲ ಅಭ್ಯಾಸ, ದೈಹಿಕ ಕಸರತ್ತಿಗೆ ಸೀಮಿತವಾಗದೆ ಮಕ್ಕಳಲ್ಲಿನ ಅಭಿರುಚಿ, ಅಸಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಆಸಕ್ತಿ ಅಭಿರುಚಿಯ ಪ್ರತಿಬಿಂಬಕ್ಕೆ ವೇದಿಕೆಯನ್ನು ಸೃಷ್ಟಿಸುವ ಅವಕಾಶಗಳನ್ನು ಒದಗಿಸಬೇಕು ಎಂದರು.
ಇದೀಗ ನಾವು ಮತ್ತು ನಮ್ಮ ಮಕ್ಕಳು ಜಾಗತಿಕವಾಗಿ ಸ್ಪರ್ಧಾ ಜಗತ್ತಿನಲ್ಲಿದ್ದೇವೆ ದೇಶದ ಗಡಿ, ಭಾಷೆಯನ್ನು ಮೀರಿ ಇತರೆ ಎಲ್ಲ ದೇಶ, ಭಾಷಿಕ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕವಾಗಿ, ಉದ್ಯೋಗದ ವಿಚಾರದಲ್ಲಿ ಪೈ ಪೋಟಿ ನಡೆಸಿ ಗೆಲ್ಲಬೇಕಾದ, ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.
ಮಕ್ಕಳನ್ನು ಜಾಗತಿಕ ಪೈಪೋಟಿ ಎದುರಿಸುವ ನಿಟ್ಟಿನಲ್ಲಿ ತಯಾರು ಮಾಡಬೇಕಾದ ಅನಿವಾರ್ಯ ಶಾಲಾ ಶಿಕ್ಷಕರದ್ದು ಮತ್ತು ಪೋಷಕರದ್ದೂ ಆಗಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ವಿಜ್ಞಾನ, ಪರಿಸರ, ಆಹಾರ ಕ್ರಮ, ಯೋಗ ಇನ್ನಿತರೆ ಅನೇಕ ವಿಷಯಗಳ ಬಗ್ಗೆ ವಸ್ತು ಪ್ರದರ್ಶನ ನಡೆಯಿತು, ಇತರೆ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.
ಡಾಲ್ಫಿನ್ ವಿದ್ಯಾ ಸಂಸ್ಥೆಯ ಎ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್,ಆಡಳಿತಾಧಿಕಾರಿ ಚಂದನ, ಪ್ರಿನ್ಸಿಪಾಲ್ ಎಲ್.ಮುನಿಕೃಷ್ಣಪ್ಪ, ಡಾ.ಶ್ರೀನಿವಾಸಮೂರ್ತಿ, ಡಾ.ಸುದರ್ಶನ್, ಆರೀಫ್ ಅಹ್ಮದ್ ಮುಂತಾದವರು ಹಾಜರಿದ್ದರು.








