ವಿಜಯ ದರ್ಪಣ ನ್ಯೂಸ್…..
ರಂಗಭೂಮಿ ಸಮಾಜದ ಪ್ರತಿಬಿಂಬ: ಪ್ರಾಂಶುಪಾಲೆ ಡಾ. ಸಿ.ಎನ್.ಸುಜಾತ

ನೆಲಮಂಗಲ: ರಂಗಭೂಮಿಯು ಮನರಂಜನೆಯ ಸಾಧನವಲ್ಲ, ಸಮಾಜವನ್ನು ಜಾಗೃತಗೊಳಿಸಿ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಸಮಾಜದ ಕನ್ನಡಿಯಾಗಿ ಕೆಲಸ ಮಾಡುತ್ತದೆ ಎಂದು ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ.ಎನ್. ಸುಜಾತ ಅಭಿಪ್ರಾಯಪಟ್ಟರು.
ನಗರದ ಸದಾಶಿವನಗರದಲ್ಲಿರುವ ರಂಗಶಿಕ್ಷಣ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ “ವಿಶ್ವ ರಂಗಭೂಮಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯು ಬಣ್ಣ, ಬೆಳಕು ಮತ್ತು ಅಭಿನಯದ ಅಪೂರ್ವ ಸಂಗಮವಾಗಿದೆ ಇದು ನಮಗೆ ಕಲೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯ ಗಳನ್ನು ಕಲಿಸಿಕೊಡುತ್ತದೆ. ಸಹಾನುಭೂತಿಯ ಜೊತೆಗೆ ಸತ್ಯವನ್ನು ಪ್ರತಿಪಾದಿಸುವ ಶಕ್ತಿ ರಂಗಭೂಮಿಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ ಸಿದ್ದರಾಜು ಮಾತನಾಡಿ, “ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಾದೇಶಿಕವಾಗಿ ಸಾಕಷ್ಟು ಕಲಾಪ್ರಕಾರ ಗಳಿವೆ. ಆದರೆ ಆಧುನಿಕ ತಂತ್ರಜ್ಞಾನದ ಅಬ್ಬರದಲ್ಲಿ ಪ್ರಾಚೀನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೀಣಿಸುತ್ತಿವೆ. ಇಂದಿನ ಯುವ ಪೀಳಿಗೆ ನಮ್ಮ ನೆಲದ ಕಲೆ ಮತ್ತು ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸಲು ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.
ಕೇಂದ್ರದ ಅಧ್ಯಕ್ಷೆ ಮಂಜುಳಾ ಸಿದ್ದರಾಜು ಮಾತನಾಡಿ, ರಂಗಭೂಮಿಯ ಶಕ್ತಿ ನಶಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಪ್ರದರ್ಶನ ಕಲೆಗಳು ಕೇವಲ ಮನರಂಜನೆಯಾಗದೆ, ಹೊಸ ವಿಷಯಗಳನ್ನು ಕಲಿಯಲು ಪ್ರೇರಕವಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಬೂದಿಹಾಲ್ ಕಿಟ್ಟಿ ಹಾಗೂ ರಂಗಭೂಮಿ ಆಸಕ್ತರು ಉಪಸ್ಥಿತರಿದ್ದರು
“ದಾಸರ ಪದಗಳ ಗಾಯನ”
ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 2, ಗುರುವಾರ ಸಂಜೆ 7-00ಕ್ಕೆ ವಿದುಷಿ ಶ್ರೀಮತಿ ಅನುಕೃಪ ಆರ್. ಪುರೋಹಿತ್ ಇವರಿಂದ “ದಾಸರ ಪದಗಳ ಗಾಯನ”. ಕೀಬೋರ್ಡ್ : ಶ್ರೀ ಬಿ. ಆರ್. ಪ್ರಕಾಶ್, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು








