ವಿಜಯ ದರ್ಪಣ ನ್ಯೂಸ್….
ತುಳಿತಕ್ಕೆ ಒಳಗಾದ ಎಲ್ಲಾ ಜನಾಂಗಗಳ ಜನರಿಗೆ ನಾಯಕರೆನಿಸಿಕೊಂಡವರು ಡಾ.ಬಿ ಆರ್ ಅಂಬೇಡ್ಕರ್

ಶಿಡ್ಲಘಟ್ಟ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭೌದ್ಧಧರ್ಮದ ಪುನರುಜ್ಜೀವಕ, ತುಳಿತಕ್ಕೆ ಒಳಗಾದ ಎಲ್ಲಾ ಜನಾಂಗಗಳ ಜನರಿಗೆ ನಾಯಕರೆನಿಸಿಕೊಂಡವರು, ಮಹಿಳಾ ಪರವಾದ ಹೋರಾಟದ ಪಿತಾಮಹ, ಮಾನವೀಯ ಹಕ್ಕುಗಳ ಹೋರಾಟಗಾರರಾಗಿದ್ದರು. ಬಸವಣ್ಣನವರು ಸ್ತ್ರೀ ಸಮಾನತೆಯ ಬಗ್ಗೆ ನೀಡಿದ ಅವಕಾಶಗಳು ಇಂದಿಗೂ ಪ್ರಸ್ತುತವೆನಿಸುತ್ತವೆ ಎಂದು ವಿಜಯಪುರದ ತರಬೇತುದಾರೆ ವಂದನಾ ಜಗದೀಶ್ ಹೇಳಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರ ಮತ್ತು ಬುದ್ಧ,ಬಸವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಪೈಗಂಬರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ವ್ಯವಸ್ಥೆಯಲ್ಲಿ ಅನ್ಯಾಯ, ಅಸಮಾನತೆಗಳು ಉಲ್ಬಖಿಗೊಂಡಾಗ ಆಯಾಯ ಕಾಲಘಟ್ಟದಲ್ಲಿ ದಾರ್ಶನಿಕರು ಜನ್ಮತಾಳಿ ಸಮಾಜವನ್ನು ಸರಿದಾರಿಗೆ ತಂದ ನಿದರ್ಶನಗಳಿವೆ ,ಅಂತಹವರಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಪೈಗಂಬರ್ ಹಾಕಿಕೊಟ್ಟ ಮಾರ್ಗವು ಸಾರ್ವಕಾಲಿಕ ಅನುಕರಣೀಯವಾದುವು ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ,
ಬುದ್ಧನ ನೀತಿ ಮತ್ತು ಸ್ವಾತಂತ್ರ್ಯವನ್ನು ಎಲ್ಲರಿಗೂ ಲಭ್ಯ ಸಾಧ್ಯವಾಗಿಸುವ ಪ್ರಜಾವ್ಯವಸ್ಥೆಯನ್ನು ಬರಹಗಳ ಮೂಲಕ ನೆನಪಿಸಿದವರಲ್ಲಿ ಅಂಬೇಡ್ಕರ್ ಅಗ್ರಗಣ್ಯರು, ತಾವೇ ಸೃಷ್ಟಿಸಿದ ಸಂವಿಧಾನದ ಮೂಲಕ ಬುದ್ಧನು ಮಾನವೀಕರಿಸಿದ ಸ್ವಾತಂತ್ರ್ಯವನ್ನು ಪ್ರತಿಸೃಷ್ಟಿಸಿದ ವ್ಯಕ್ತಿ ಹಾಗು ಭಾರತೀಯ ರಾಷ್ಟ್ರೀಯತೆಯ ಪ್ರತಿಪಾದಕರು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಪ್ರತಿಷ್ಟಾಪಿಸಿದ ಕಾರ್ಮಿಕ ಹಕ್ಕುಗಳ ಹೋರಾಟ ದನಿಯು ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದು, ಕಾರ್ಮಿಕರಿಗೆ ಸಿಗಬಹುದಾದ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ, ಅವರಲ್ಲಿದ್ದ ಅಪ್ಪಟವಾದ ಪುಸ್ತಕ ಪ್ರೇಮತ್ವವು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ನುಡಿದರು.
ಕರ್ನಾಟಕ ಮಾದಾರ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಡಿ.ದೇವರಾಜು ಮಾತನಾಡಿ, ಸಮಾಜದಲ್ಲಿನ ಮೌಡ್ಯತೆ, ಕಂದಾಚಾರದಂತಹ ಸಮಾಜಘಾತುಕ ಆಚರಣೆಗಳನ್ನು ಹೋಗಲಾಡಿಸಿ ೧೨ ನೇ ಶತಮಾನದಲ್ಲಿ ಸರ್ವಸಮಾನತೆಯ ಸಭ್ಯಸಮಾಜ ಸೃಷ್ಟಿಸುವಲ್ಲಿ ಬಸವಾದಿ ಶರಣರ ಕಾರ್ಯವು ಶ್ಲಾಘನೀಯವಾದುದು ಎಂದರು.
ಇದೇ ವೇಳೆ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಗಾಂಧಾರಕಲೆ, ಮೌಲ್ಯಯುತ ನೀತಿ ಕತೆಗಳ ಬೋಧನೆ, ಸುರಕ್ಷಿತ ಮತ್ತು ಅಸುರಕ್ಷಿತ ಕೆಲಸಗಳು, ಗಾಯನ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆದವು.
ಈ ಸಂದರ್ಭದಲ್ಲಿ ಶಿಕ್ಷಕ ಎ.ಬಿ.ನಾಗರಾಜ,ವಂದನಾ, ಟಿ.ಎಂ.ಮಧು, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಮಾಜಿ ಸದಸ್ಯ ಬಚ್ಚೇಗೌಡ, ವೇಣುಗೋಪಾಲ್, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.










