ವಿಜಯ ದರ್ಪಣ ನ್ಯೂಸ್….
ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಗೋಮಾಳ ಜಾಗವನ್ನು ದನಕರುಗಳು ಮೇಯಲು ಬಿಡ್ಬೇಕು ಎಂದು ಪ್ರತಿಭಟನೆ

ಶಿಡ್ಲಘಟ್ಟ – ಹಸುಗಳನ್ನು ಮೇಯಿಸಲು ಗೋಮಾಳ ಜಾಗವಿಲ್ಲ ಗ್ರಾಮದ ಕೆಲ ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದು ,ಮೂಗ ಜೀವಗಳನ್ನು ಮೇಯಿಸಲು ಗೋಮಾಳ ಜಾಗ ಬಿಟ್ಟುಕೊಡುವಂತೆ ವರದನಾಯಕನಹಳ್ಳಿಯ ಜಾನಪದ ಕಲಾವಿದ ಈಧರೆ ಪ್ರಕಾಶ್ ಅವರು ಪತ್ನಿ, ಮಕ್ಕಳು, ಹಸು, ಕುರಿಗಳೊಂದಿಗೆ ತಾಲೂಕು ಕಚೇರಿ ಮುಂದೆ ತಮಟೆ ಬಾರಿಸಿಕೊಂಡು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರಿಂದ ಎದುರಾಗುತ್ತಿರುವ ನಿರಂತರ ಮಾನಸಿಕ ಕಿರುಕುಳ ತಪ್ಪಿಸಿ ಎಂದು ಈಧರೆ ಪ್ರಕಾಶ್ ಗ್ರಾಮದಿಂದ ಕಾಲ್ನಡಿಗೆ ಮೂಲಕವೇ ತಾಲ್ಲೂಕು ಕಚೇರಿ ಬಳಿ ಬಂದು ನ್ಯಾಯಕ್ಕಾಗಿ ಹೋರಾಟ ಕೈಗೊಂಡರು,ಸಂವಿಧಾನ ಪೀಠಿಕೆ ಹಿಡಿದು ಪ್ರತಿಭಟನೆ ನಡೆಸಿದ ಕುಟುಂಬವು, ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ನಾವು ಕಸ ಹಾಕುತ್ತಿದ್ದ ತಿಪ್ಪೆ ಜಾಗಕ್ಕೆ ಗ್ರಾಮದ ಕೆಲವು ಮೇಲ್ವರ್ಗದವರು ಅಡ್ಡಿಪಡಿಸುತ್ತಿದ್ದಾರೆ ,ಆ ಜಾಗವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುವ ಜತೆಗೆ ನಮಗೆ, ಜಾನುವಾರುಗಳಿಗೆ ನಿರಂತರವಾಗಿ ಹಿಂಸೆ
ನೀಡುತ್ತಿದ್ದಾರೆ ಎಂದು ಆರೋಪಿಸಿತು.
ಗ್ರಾಮದಲ್ಲಿದ್ದ ಎಲ್ಲಾ ಗೋಮಾಳ ಜಮೀನು ಮೇಲ್ವರ್ಗದವರೇ ಹಿಡಿದುಕೊಂಡಿದ್ದಾರೆ ,ಹಸುಗಳಿಗೆ ಮೇಯಿಸಲು ಜಾಗವಿಲ್ಲದೆ ತೊಂದರೆಯಾಗುತ್ತಿದೆ ನ್ಯಾಯ ಸಿಗದಿದ್ದರೆ ನಮ್ಮ ಹಸುಗಳನ್ನು ಇಲ್ಲೇ ಕಟ್ಟಿ ಹಾಕುತ್ತೇವೆ ಎಂದು ಈಧರೆ ಪ್ರಕಾಶ್ ಎಚ್ಚರಿಕೆ ನೀಡಿದರು.
ಗ್ರಾಮದ ಗೋಮಾಳ ಜಾಗ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ಮೂಲಕ ಗ್ರಾಮದ ದನ, ಕರುಗಳಿಗೆ ಮೇಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎನ್.ಗಗನಸಿಂಧುಗೆ ಮನವಿ ಸಲ್ಲಿಸಿದರು.
ತಹಶಿಲ್ದಾರ್ ಎನ್.ಗಗನಸಿಂಧು ಮಾತನಾಡಿ , ಗೋಮಾಳ ಒತ್ತುವರಿ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ದೂರು ಬಂದಿದ್ದು, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾನಪದ ಕಲಾವಿದ ಮಾತನಾಡಿ , ಗ್ರಾಮ ಮಟ್ಟದಲ್ಲಿ ಎಷ್ಟೇ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ,ನಮಗೆ ಭೂಮಿ ಮತ್ತು ನ್ಯಾಯ ಬೇಕು ಸಂವಿಧಾನ ನಮಗೆ ಬದುಕುವ ಹಕ್ಕನ್ನು ನೀಡಿದೆ ಆದರೆ ಗ್ರಾಮದಲ್ಲಿ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ತಾತಹಳ್ಳಿ ಚಲಪತಿ, ನರಸಿಂಹಮೂರ್ತಿ, ವಿಜಯ್ ಕುಮಾರ್, ರೈತ ಮುಖಂಡ ಪ್ರತೀಶ್, ದೇವಪ್ಪ ಇನ್ನೀತರರು ಹಾಜರಿದ್ದರು.










