ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ದರೋಡೆ : ಆಭರಣ ಲೂಟಿ.

 

ವಿಜಯ ದರ್ಪಣ ನ್ಯೂಸ್ .. ಮದ್ದೂರು 

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲಿಸಿ ಹೋದ ಬೆನ್ನಲ್ಲೇ ಮಧ್ಯರಾತ್ರಿ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯನ್ನು  ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ  ಮದ್ದೂರು ಪಟ್ಟಣದಲ್ಲಿ ನಡೆದಿದೆ.

ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಮುತ್ತಪ್ಪ ಕೆ.ಕೆ ರವರನ್ನು ಮೂವರು ದುಷ್ಕರ್ಮಿಗಳು ಡ್ರ್ಯಾಗನ್ ತೋರಿಸಿ ಬೆದರಿಸಿ ಅವರ ಬಳಿಯಿದ್ದ 65 ಗ್ರಾಂ ನ ಚಿನ್ನದ ಸರ ಕಸಿದಿದ್ದಾರೆ.

ಮೆದುಳು ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದ ಮುತ್ತಪ್ಪ ಮರಳಿ ಇನೋವಾಕಾರಿನಲ್ಲಿ ( ಕೆಎ -12 ಎಂ ಬಿ :0763) ವಾಪಸ್ ಆಗುತ್ತಿದ್ದಾಗ ಮಧ್ಯರಾತ್ರಿ 2- 15 ರ ಸಮಯದಲ್ಲಿ ತಲೆಸುತ್ತಿದಂತೆ ಆಗಿದ್ದು, ಮದ್ದೂರು ಪಟ್ಟಣದ ಐಶ್ವರ್ಯ ಕಾನ್ವೆಂಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ಮೂವರು

ನಾವು ಪೊಲೀಸರು ನೀವು ಕುಡಿದಿದ್ದೀರಾ ಇಲ್ಲವಾ ಪರೀಕ್ಷಿಸಬೇಕು ಬಾಗಿಲು ತೆಗೆಯಿರಿ ಎಂದು ಹೇಳಿದ್ದು, ಬಾಗಿಲು ತೆಗೆದೊಡನೆ ಇಬ್ಬರು ಒಳಗೆ ನುಗ್ಗಿ ಡ್ರ್ಯಾಗನ್ ತೋರಿಸಿ ಬೆದರಿಸಿದ್ದು, ಮುತ್ತಪ್ಪ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಮತ್ತು ಅದರ ಜೊತೆಯಲ್ಲಿದ್ದ 15 ಗ್ರಾಂ ತೂಕದ ಚಿನ್ನದ ತಾಯಿತ ಕಸಿಯಲು ಯತ್ನಿಸಿದ್ದು ಮುತ್ತಪ್ಪ ಪ್ರತಿರೋಧ ತೋರಿದಾಗ ಡ್ರಾಗನ್ ನಲ್ಲಿ ಮುಂಗೈ ಮತ್ತು ಕುತ್ತಿಗೆ ಬಳಿ ಗಾಯಗೊಳಿಸಿ ಆಭರಣ ದೋಚಿ ಪರಾರಿಯಾಗಿದ್ದಾರೆ.

ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಾಗ ದರೋಡೆ ವಿಚಾರ ಬೆಳಕಿಗೆ ಬಂದಿದ್ದು, ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮದ್ದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.