ವಿಜಯ ದರ್ಪಣ ನ್ಯೂಸ್…
ಕೃಷಿ ಪಂಡಿತ್ ಹಿತ್ತಲಹಳ್ಳಿ ಗೋಪಾಲಗೌಡರ ತೋಟಕ್ಕೆ ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಭೇಟಿ

ಶಿಡ್ಲಘಟ್ಟ : ಹೈನುಗಾರಿಕೆಯು ನಿತ್ಯ ಆದಾಯ ಮತ್ತು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದ್ದು ರೇಷ್ಮೆ ಕೃಷಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿದೆ ಎಂದು
ಪ್ರಗತಿಪರ ಕೃಷಿಕರು ಹಾಗು ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಜಿ.ಗೋಪಾಲಗೌಡ ಅವರು ಹೇಳಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ಸೊಪ್ಪಿನ ತೋಟಕ್ಕೆ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಪ್ರೋಪೆಸರ್ , ವಿಜ್ಞಾನಿ ಡಾ.ವಿನೋದ ಹಾಗು 52 ಮಂದಿ ವಿದ್ಯಾರ್ಥಿಗಳು ಭೇಟಿ ನೀಡಿದ್ದ ಅವರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಅವರು ನಿರ್ವಹಣೆ ಮಾಡುವ ಸಮಗ್ರ ಕೃಷಿ ಪದ್ಧತಿ, ಹಿಪ್ಪುನೇರಳೆ ತೋಟದ ನಿರ್ವಹಣೆ, ಮಣ್ಣುಪರೀಕ್ಷೆ, ರೇಷ್ಮೆ ಸೊಪ್ಪಿಗೆ ಸುಳಿ, ಗಂಟು, ಬೇರುಕೊಳೆ, ಸುರಳಿ, ಎಲೆ ಮುದುರು, ನುಸಿರೋಗ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗು ರೋಗ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.
ಕೃಷಿ ವಿದ್ಯಾರ್ಥಿಗಳು ರೇಷ್ಮೆ ಹುಳು ಸಾಕಾಣಿಕೆ ಮನೆ, ಚಂದ್ರಂಕಿ ಶೆಡ್ಡು, ಸಮಗ್ರ ಕೃಷಿ,ಹಸು, ಎಮ್ಮೆ, ಕೋಳಿ, ಕುರಿ,ಜೇನು, ಮೀನು ಸಾಕಾಣಿಕೆ ಬಗ್ಗೆಯ ಮಾಹಿತಿ ಪಡೆದರು.









