ವಿಜಯ ದರ್ಪಣ ನ್ಯೂಸ್…..
ಕೆಎಂಡಿಸಿಯಿಂದ 1.98 ಕೋಟಿ ರೂ.ಗಳ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದ ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮದಲ್ಲಿ ತೊಡಗಿರುವ ಮುಸ್ಲಿಮ್ ಬಾಂಧವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು ರೇಷ್ಮೆ ನೂಲು ಬಿಚ್ಚಾಣಿಕೆ ಯೋಜನೆಯಡಿ ಫಲಾನುಭವಿಗಳಿಗೆ 1.92 ಕೋಟಿ ರೂ.ಗಳು ಮಂಜೂರಾಗಿದೆ ಎಂದು ಶಾಸಕ .ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ’ದಿಂದ 2025-26ನೇ ಸಾಲಿನ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಿಗೆ ಆಯ್ಕೆಯಾದ 102 ಫಲಾನುಭವಿಗಳಿಗೆ 1.98 ಕೋಟಿ ರೂ.ಗಳ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಬೇಕೆಂಬ ಉದ್ದೇಶದಿಂದ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು ಅದರ ಫಲವಾಗಿ ಹೆಚ್ಚಿನ ಅನುದಾನ ದೊರೆತಿದೆ ಎಂದು ಹೇಳಿದರು.
ಟ್ಯಾಕ್ಸಿ ಹಾಗೂ ಸರಕು ವಾಹನ ಖರೀದಿ ಯೋಜನೆಯಡಿ ಒಬ್ಬ ಫಲಾನುಭವಿಗೆ 3 ಲಕ್ಷ ರೂ.ಗಳು, ವೃತ್ತಿ ಪ್ರೋತ್ಸಾಹ ಯೋಜನೆಯಡಿ ಇಬ್ಬರಿಗೆ 2 ಲಕ್ಷ ರೂ.ಗಳು ಹಾಗೂ ಶ್ರಮಶಕ್ತಿ ಯೋಜನೆಯಡಿ ಮೂವರಿಗೆ 1.50 ಲಕ್ಷ ರೂ.ಗಳು ಮಂಜೂರಾಗಿದ್ದು, ಒಟ್ಟು 102 ಫಲಾನುಭವಿಗಳಿಗೆ 1.98 ಕೋಟಿ 50 ಸಾವಿರ ರೂ.ಗಳ ಮಂಜೂರಾತಿ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.

ಕೆಎಂಡಿಸಿ ಡೆತ್ ಕೇಸ್ ಯೋಜನೆಯಡಿ ಸಾಲ ಪಡೆದು ಮೃತಪಟ್ಟ ಫಲಾನುಭವಿಗಳ ಕುಟುಂಬಗಳು ಸಾಲಮನ್ನಾ ಶಿಫಾರಸು ಆದೇಶ ಪತ್ರ ವಿತರಿಸಲಾಯಿತು. 6 ಕುಟುಂಬಗಳಿಗೆ ಒಟ್ಟು 44.78 ಲಕ್ಷ ರೂ.ಗಳ ಸಾಲಮನ್ನಾ ಮಾಡಲಾಗಿದ್ದು, ಇದರಲ್ಲಿ 29.45 ಲಕ್ಷ ರೂ.ಗಳ ಮೂಲಸಾಲ ಹಾಗೂ 15.33 ಲಕ್ಷ ರೂ.ಗಳು ಬಡ್ಡಿ ಸೇರಿದೆ, ಮುಂದಿನ ವರ್ಷವೂ, ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ, ಸರ್ಕಾರಕ ವಿವಿಧ ಯೋಜನೆಗಳ ಪ್ರಯೋಜನವನ್ನು ತಲುಪಿಸುವ ಕಾರ್ಯ ಮುಂದುವರಿಸಲಾಗುವುದು ಎಂದರು.
ಅಧಿಕಾರಿಗಳು ಸರ್ಕಾರಿ ಯೋಜನೆಗಳ ಸೌಲಭ್ಯಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಹಾಗೂ ಇನ್ನಿತರ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸಲಾಗುವುದು,ಗಂಗಾ ಕಲ್ಯಾಣ ಯೋಜನೆಯಡಿ ಇನ್ನೂ ಸೌಲಭ್ಯ ಪಡೆಯದು ಅರ್ಹ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ, ಅಧಿಸೂಚನೆಗೆ ಹೊರಡಿಸಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ, ರೀಲರ್ಸ್ ಸೊಸೈಟಿ ಅಧ್ಯಕ್ಷ ಜಿ.ರೆಹಮಾನ್, ಶರೀಫ್, ನಗರಸಭೆ ಮಾಜಿ ಸದಸ್ಯ ಶಫಿವುಲ್ಲಾ,ಅಸಾದ್,ಇಮ್ತಿಯಾಜ್ ಪಾಷ, ಸಿಕಂದರ್,ಫರೂಕ್, ಅತೀಖ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.










