ವಿಜಯ ದರ್ಪಣ ನ್ಯೂಸ್…..
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳಿಗೆ ಪ್ರೇರಣೆ : ಆಂಜಿನಪ್ಪ (ಪುಟ್ಟು)

ಶಿಡ್ಲಘಟ್ಟ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ
ನೀಡುವುದು ಹಾಗೂ ಎಲೆ ಮರೆಯ ಕಾಯಿಗಳಂತೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ತೊಡಗಿಸಿಕೊಂಡಿರುವ ಸಾಧಕರನ್ನು ಸನ್ಮಾನಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಶ್ರೀ ಗುಟ್ಟಾಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ದಿವಂಗತ ಬೆಳ್ಳೂಟಿ ಸಂತೋಷ್ ಅವರ ನೆನಪಿನಲ್ಲಿ ಸರ್ಕಾರಿ ಹಾಗು ಖಾಸಗಿ ಶಾಲೆಗಳ ಎಸ್.ಎಸ್.ಎಲ್.ಸಿ.ಯ ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡಿದ್ದ “ಪ್ರತಿಬಾ ಪುರಸ್ಕಾರ” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈಗಿನ ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ರೂವಾರಿಗಳು ಹಾಗಾಗಿ ಪ್ರತಿಯೊಬ್ಬ ಮಗುವೂ ಶ್ರದ್ದೆ ಹಾಗು ಶಿಸ್ತು ರೂಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಸಾಧನೆ ಮಾಡಿ ಹೆತ್ತ ತಾಯಿ ತಂದೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ನಾವು ಮಾಡುತ್ತಿರುವುದು ಸಣ್ಣ ಪ್ರಯತ್ನ ಮಾತ್ರ, ಇಂದಿನ ಮಕ್ಕಳು ಯಾವುದರಲ್ಲಿಯೂ ಕಡಿಮೆಯೇನಿಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಜತೆಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಸಮಾಜಕ್ಕೆ ಏನಾದರೂ ಹಿಂದಿರುಗಿಸುವ ಕೆಲಸವನ್ನೂ ಸಹ ಮಾಡಬೇಕು ಎಂದು ಮನವಿ ಮಾಡಿದರು.
ಪ್ರತಿಯೊಬ್ಬರ ಬೆಳವಣಿಗೆಯಲ್ಲೂ ಪೋಷಕರು, ಶಿಕ್ಷಕರು, ಸ್ನೇಹಿತರು ಮುಂತಾದವರ ಕಾಣಿಕೆಯಿರುತ್ತದೆ ಬೆಳೆಯುವ ಹಾದಿಯನ್ನು ಮರೆಯಬಾರದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಇಬ್ಬರು ಮಕ್ಕಳಿಗೆ ಎಲೆಕ್ಟ್ರಿಕ್ ಸ್ಕೂಟರ್ ,ಐವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ,ಹಿರಿಯ ಸಾಧಕರಿಗೆ ಸನ್ಮಾನ, ತಾಲ್ಲೂಕಿನ ಸುಮಾರು ೫೦೦ ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಂ.ಎಫ್ ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷ ಸುಭ್ರಮಣಿ ,ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್ ,ಗ್ರಾ.ಪಂ.ಸದಸ್ಯೆ ಬೆಳ್ಳೂಟಿ ವರಲಕ್ಷ್ಮಿಸಂತೋಷ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಕಾಳನಾಯಕನಹಳ್ಳಿ ಭೀಮೇಶ್, ಗುಡಿಹಳ್ಳಿ ಚಂದ್ರನಾಥ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅದ್ಯಕ್ಷ ರಾಹುಲ್ ,ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಾಜಕುಮಾರ್,ಸಿ.ಎನ್.ಮಹೇಶ್, ದೇವರಾಜ್ ,ಆನೂರು ಆನಂದ್,ತುಮ್ಮನಹಳ್ಳಿ ವೆಂಕಟೇಶ್,ಹಿತ್ಲಳ್ಳಿ ಸುರೇಶ್, ಬೂದಾಳ ವರದರಾಜ್,ರಾಮಾಂಜನೇಯ, ಕೋಟಹಳ್ಳಿ ದೇವರಾಜ್, ಗೌಡನಹಳ್ಳಿ ಮಂಜುನಾಥ್ ಮತ್ತಿತರರು ಹಾಜರಿದ್ದರು.











