ಓದಿನರಮನೆಯಲ್ಲಿ ಯಕ್ಷಾಲಾಪ

ವಿಜಯ ದರ್ಪಣ ನ್ಯೂಸ್

ಬೆಂಗಳೂರು

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕಳೆದ 180 ತಿಂಗಳುಗಳಿದ ನಡೆಸುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಸರಣಿ 181ರ ಅಂಗವಾಗಿ ಡಾ. ಎಂ. ಬೈರೇಗೌಡರ ಅಭಿನಯದ ಯಕ್ಷಾಲಾಪ ಏಕವ್ಯಕ್ತಿ ಪ್ರದರ್ಶನವಿದೆ.
ಕಾಳಿದಾಸನ ಮೇಘದೂತ ಒಂದು ವಿಶಿಷ್ಟ ಕೃತಿ. ಮಹಾಕಾವ್ಯದಲ್ಲಿ ಅಡಕಮಾಡಬಹುದಾದ ವಿವರಗಳು ಈ ಕಾವ್ಯದಲ್ಲಿವೆ. ಪ್ರೊ. ನಾರಾಯಣಘಟ್ಟ (ನಾಹೊ) ಕನ್ನಡದ ಅನುಸೃಷ್ಟಿ ‘ಮೇಘದೂತ ದರ್ಶನಂ’ ನಲ್ಲಿ ದರ್ಶನ ಮಾಡಿಸಿದ್ದಾರೆ.
ಸಂಗೀತ: ಪ್ರಸನ್ನಕುಮಾರ್ ಎಂ.ಎಸ್., ಬೆಳಕು, ಪ್ರಸಾದನ ಮತ್ತು ಮರುನಿರ್ದೇಶನ: ನವೀನ್ ಭೂಮಿ, ರಂಗಪರಿಕರಗಳು: ವಿಶ್ವನಾಥ ಮಂಡಿ, ಸಂಗೀತ ನಿರ್ವಹಣೆ: ಕುಣಿಗಲ್ ರಂಗ, ನಿರ್ದೇಶನ, ವಿನ್ಯಾಸ: ಜೋಸೆಫ್ ಜಾನ್, ಅಭಿನಯ: ಡಾ. ಎಂ. ಬೈರೇಗೌಡ.
ಮಹಾಕವಿ ಕಾಳಿದಾಸ ಎರಡು ಮಹಾಕಾವ್ಯ (ಕಮಾರಸಂಭವ, ರಘುವಂಶ), ಎರಡು ಖಂಡಕಾವ್ಯ (ಋತುಸಂಹಾರ, ಮೇಘದೂತ), ಮೂರು ನಾಟಕಗಳು (ಮಾಳವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಅಭಿಜ್ಞಾನ ಶಾಕುಂತಲ) ಒಟ್ಟು ಏಳು ಶ್ರೇಷ್ಟ ಕೃತಿಗಳನ್ನು ರಚಿಸಿದ್ದಾನೆ. ಅಂತ ಶ್ರೇಷ್ಟಕವಿ ಕಾಳಿದಾಸ ಕೃತಿ ಆಧಾರಿತ ಕನ್ನಡದ ಮೇಘದೂತ ದರ್ಶನಂ ಕಾವ್ಯಭಾಗದಿಂದ ರಚಿತವಾದ ಏಕಾಂಕ ನಾಟಕ-ಈ ‘ಯಕ್ಷಾಲಾಪ’.

ಮಣಿಕಂಠನೆಂಬ ಯಕ್ಷ ಅಲಕಾಪುರ ನಿವಾಸಿ. ಕುಬೇರನರಮನೆಯ ಸುಂದರ ಪರಿಸರದಲ್ಲಿ ಅವನ ಮನೆ. ಇಂತಿರಲು ಕುಬೇರನಿಗೆ ಪ್ರಿಯವಾದ ಹೂದೋಟವನ್ನು ಇಂದ್ರನ ಐರಾವತ ಹಾಳುಮಾಡಿತ್ತು. ತೋಟದ ಅಧಿಕಾರಿ ಯಕ್ಷ. ಆತನ ಅಜಾಗರೂಕತೆ ಕಾರಣದಿಂದಲೇ ಹೀಗಾಯಿತೆಂದು ಭಾವಿಸಿದ ಕುಬೇರ ಅವನಿಗೆ ಒಂದು ವರ್ಷದ ಗಡಿಪಾರಿನ ಕಠಿಣಶಿಕ್ಷೆ ವಿಧಿಸಿದ. ಒಂದು ಸಣ್ಣ ತಪ್ಪಿಗೆ ಇಂಥ ಕ್ರೂರ ಶಿಕ್ಷೆಯೇ ಎಂದು ಮರುಗಿದ. ಶಾಪವಿಮೋಚನೆಗೆ ವಿಂಧ್ಯಪರ್ವತ ತಪ್ಪಲಿನ ರಾಮಗಿರಿಯನ್ನು ಆಯ್ದುಕೊಂಡ.  ವಿಧಿಯನ್ನು ಅಳಿದುಕೊಳ್ಳುತ್ತಾ ಎಂಟು ತಿಂಗಳು ಕಳೆದಿದ್ದಾನೆ. ಯಕ್ಷ ಖಿನ್ನತೆಯಿಂದ ಅಲೆದಾಡುತ್ತ, ಹುಚ್ಚನಂತೆ ಕಾಣುತ್ತಾನೆ.  ಆಗ ಅವನ ನೆರವಿಗೆ ಬರುವುದು ಮೇಘ. ಮೇಘನ ಮೂಲಕ ತನ್ನ ಮಡದಿಗೆ ಸಂದೇಶವನ್ನು ಕಳುಹಿಸುವ ಈ ಪ್ರದರ್ಶನವೇ ಯಕ್ಷಾಲಾಪ

Dr. M. Byregowda
9448102158