ವಿಪತ್ತುಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸದಾ ಸನ್ನದ್ದರಾಗಿರಿ: ಜಿಲ್ಲಾಧಿಕಾರಿ ಡಾ. ಶಿವಶಂಕರ್

ವಿಜಯ ದರ್ಪಣ ನ್ಯೂಸ್ 

ದೇವನಹಳ್ಳಿ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 20 ವಿಪತ್ತುಗಳು ಆಕಸ್ಮಿಕವಾಗಿ ಸಂಭವಿಸುವುದರಿಂದ , ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ದರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ. ಶಿವಶಂಕರ್. ಎನ್ ಅವರು ಹೇಳಿದರು.

ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಡಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಹಜ್ ಟರ್ಮಿನಲ್ ಪ್ರದೇಶದಲ್ಲಿ ನಡೆಸಲಾದ ವಿಕಿರಣ ಸೋರಿಕೆ ಸ್ಪಂದನ ಮತ್ತು ಮೌಲ್ಯೀಕರಣ ಬಗ್ಗೆ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಎಲ್ಲಾ ಇಲಾಖೆಗಳು ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗತ್ತದೆ. ಈ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಅಣುಕು ಪ್ರದರ್ಶನದಲ್ಲಿ ವಿಕಿರಣ ಪಟುತ್ವ ಸಾಗಿಸುವ ಪೆಟ್ಟಿಗೆ ಒಂದರಿಂದ ವಿಕಿರಣ ಸೋರಿಕೆಯಾಗಿ ಎಂಟು ಜನರಿಗೆ ವಿಕಿರಣ ತಾಗಿ ಅದರಲ್ಲಿ ಮೂರು ಜನಕ್ಕೆ ಹೆಚ್ಚಿನ ಗಾಯಗಳಾಗಿ ಪ್ರಜ್ಞೆ ತಪ್ಪಿದ್ದರು ಅವರನ್ನು ಕೊಡಲೇ ಎಸ್ಟರ್ ಅಸ್ಪತ್ರೆ ಗೆ ಕಳುಹಿಸಲಾಯಿತು, ಇತರೆ ಗಾಯಾಳುಗಳನ್ನು ಬೆಂಗಳೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ವಿಕಿರಣವನ್ನು ಹೊರತೆಗೆಯಲು ಮತ್ತು ವಿಕಿರಣವು ಯಾವ ಪ್ರಮಾಣದಲ್ಲಿ ಹೊರ ಸೂಸುತ್ತಿದೆ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಅಣು ಶಕ್ತಿ ಕೇಂದ್ರದ ವಿಜ್ಞಾನಿಗಳು ಎನ್ ಡಿ ಆರ್ ಎಸ್ ತಂಡ ವಿಕಿರಣ ಪಸರಿಸದಂತೆ ಕೆಂಪು ಪಟ್ಟಿಯ ಮೂಲಕ ಸುತ್ತಲಿನ ಪ್ರದೇಶವನ್ನು ತಾತ್ಕಾಲಿಕ ತಡೆಗೋಡೆಯಾಗಿ ನಿರ್ಮಿಸಿ ನಿಷೇಧಿತ ಪ್ರದೇಶ ಘೋಷಿಸಲಾಯಿತು. ವಿಕಿರಣ ಪೆಟ್ಟಿಗೆಯಿಂದ ಹೆಚ್ಚಿನ ಮಟ್ಟದಲ್ಲಿ ವಿಕಿರಣ ಹೊರ ಬರುತ್ತಿದ್ದರಿಂದ ಸ್ಥಳೀಯ ಕಾರ್ಯಚರಣೆ ತಂಡಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ರಕ್ಷಣೆಗಾಗಿ ಕೋರಿದರು.

ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಹತ್ತೋಟಿಗೆ ತೆಗೆದುಕೊಂಡು ಸಂಬಂಧಿಸಿದ ತಂಡಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿ ತಕ್ಷಣ ಪರಿಸ್ಥಿತಿ ನಿಯಂತ್ರಿಸುವಂತೆ ಸೂಚಿಸಿದರು ಕೇವಲ ಹತ್ತರಿಂದ ಹದಿನೈದು ನಿಮಿಷಗಳ ಸಮಯದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಹತೋಟಿಗೆ ತರಲಾಯಿತು. ಈ ಕಾರ್ಯಾಚರಣೆಯಲ್ಲಿ ಎನ್ ಡಿ ಆರ್ ಎಫ್ ತಂಡ,ಡಿ.ಐ.ಎಫ್(DIF), ಅಗ್ನಿಶಾಮಕ(FIRE),ಆರ್ಮಿ(ARMY), ಎರ್ ಫೋರ್ಸ್(AIRFORCE), ಪೋಲಿಸ್ ತಂಡಗಳು ರಕ್ಷಣೆಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎನ್ ಡಿ ಆರ್ ಎಸ್ ತಂಡವು ವಿಕಿರಣ ಸೋರಿಕೆಯಿಂದ ಹಾನಿಗೊಳಗಾದ ಸಂತ್ರಸ್ತರನ್ನು ರಕ್ಷಿಸಿದರು. ಅಂತಿಮವಾಗಿ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ಆಯಾ ತಂಡಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ನಂತರ ಜಿಲ್ಲಾಧಿಕಾರಿ ವಿಪತ್ತು ನಿರ್ವಹಣೆ ಕಾರ್ಯಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದೆ ಎಂದು ಘೋಷಿಸಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿವೃತ್ತ ಬ್ರಿಗೇಡಿಯರ್ ಮತ್ತು ಸಲಹೆಗಾರರಾದ ಠಾಕೂರ್, ಡಿ.ಐ.ಎ.ಎಲ್(D.I.A.L) ಮುಖ್ಯಸ್ಥರಾದ ಡಾ‌.ಕೆ.ಹೆಚ್ ದೇವದಾಸೀಯ,ಡಿ.ಜಿ.ಎ.ಜಿ ಮುಖ್ಯಸ್ಥರು, ಡಿ.ಎ.ಇ(DAE) ವಿಜ್ಞಾನಿಗಳು, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿತರು ನಿತಿನ್ ಕಾಲ್ವಾ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಬಸವರಾಜು ವಿ, ಎನ್.ಡಿ.ಆರ್.ಫ್(NDRF), ಸಿ.ಐ.ಎಸ್.ಎಫ್(CISF), ಎಸ್.ಡಿ.ಆರ್.ಎಫ್(SDRF),ಡಿ.ಎಸ್.ಡಬ್ಲ್ಯೂ. ಒ(DSWO) ನ ಮುಖ್ಯಸ್ಥರು, ತಂಡ, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕ ಸೋಮಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.