ಕ್ರಾಂತಿಕಾರಿ ಸಮಾಜ ಸುಧಾರಕ ಸಂತಕವಿ ಕನಕದಾಸರು: ಸಚಿವ ಕೆ.ಹೆಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್

ಸಂತಕವಿ ಕನಕದಾಸರ 536 ನೇ ಜಯಂತ್ಯುತ್ಸವ

ದೇವನಹಳ್ಳಿ  ಬೆಂಗಳೂರು ಗ್ರಾಮಾಂತರ ಜಿಲ್ಲೆ, ನವೆಂಬರ್ 30 : 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ ಕ್ರಾಂತಿಯೋಗಿ ಬಸವಣ್ಣನವರಂತೆ, 15 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ಮಹಾನ್ ಸಂತ, ದಾಸ ಶ್ರೇಷ್ಠರಾದ ಕನಕದಾಸರು ಪ್ರಮುಖರು ಎಂದು ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ “ಸಂತಕವಿ ಕನಕದಾಸರ 536 ನೇ ಜಯಂತ್ಯುತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು ಸಮಾಜದ ಸುಧಾರಣೆಗಾಗಿ ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತ ವಾಗಿವೆ. ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ದಾರ್ಶನಿಕರು ಕನಕದಾಸರು. ಮಾನವಕುಲವೊಂದೇ ಎಂದು ಸಮಾಜದ ಸಮಾನತೆಗಾಗಿ ಶ್ರಮಿಸಿದರು.

ಬುದ್ಧ, ಬಸವಣ್ಣ, ಸಂತ ತುಕರಾಂ, ಪುರಂದರದಾಸರು ಇವರೆಲ್ಲರೂ ಇತಿಹಾಸ ಕಂಡ ಮಹಾನ್ ವ್ಯಕ್ತಿಗಳು ಅವರ ಸಾಲಿನಲ್ಲಿ ಕನಕದಾಸರು ಸೇರುತ್ತಾರೆ. ಕನಕದಾಸರು ಉಡುಪಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದಿರುವ ರೀತಿ ದೇವರ ಇರುವುದಕ್ಕೆ ಪ್ರತ್ಯಕ್ಷ ಸಾಕ್ಷಿ, ಹಾಗಾಗಿ ಕನಕದಾಸರನ್ನು ದಾಸಶ್ರೇಷ್ಠರು ಎಂದು ಕರೆಯುತ್ತಾರೆ. ಆ ಸ್ಥಳ ಇಂದಿಗೂ ಕನಕನ ಕಿಂಡಿ ಎಂದು ಪ್ರಸಿದ್ಧಿ ಪಡೆದಿದೆ ಎಂದು ಸಚಿವರು ಹೇಳಿದರು.

ಸಮುದಾಯದ ಮನವಿಗಳಿಗೆ ಸ್ಪಂದಿಸಿದ ಸಚಿವರು ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡಲು ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಿಸಿಲು ಸೂಕ್ತ ಜಾಗ ಗುರ್ತಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಮಾತನಾಡಿ ಮನುಕುಲದ ಶ್ರೇಷ್ಠ ರು, ಮಹಾನ್ ಕವಿಗಳು, ಜಾತಿ ಎಲ್ಲೆ ಮೀರಿ, ಕುಲ-ಕುಲವೆಂದು ಹೊಡೆದಾಡದಿರಿ ಎಂದು ಹೇಳಿದವರು ಕನಕದಾಸರು. ಅವರ ಮಾರ್ಗದರ್ಶನಗಳು ನಮ್ಮೆಲ್ಲರಿಗೂ ಸ್ಪೂರ್ತಿ, 15-16ನೇ ಶತಮಾನದಲ್ಲಿ ಸಮಾನತೆಯ ದಾರಿ ತೋರಿದವರು, ಸಮಾನತೆ, ಭ್ರಾತೃತ್ವವನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಹೇಳಿದವರು ಕನಕದಾಸರು, ಅವರ ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದು ಅವರು ಹೇಳಿದರು.

ದಾಸ ಶ್ರೇಷ್ಠ ಕನಕದಾಸರ ಬಗ್ಗೆ ಹೇಳಿದ ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್ ಅವರು, 15 ನೇ ಶತಮಾನದ ದಾಸಶ್ರೇಷ್ಠರು, ಮೊದಲು ದಂಡನಾಯಕರಾಗಿದ್ದು ಹಿಂಸೆಯ ಜೀವನ ಬೇಡ ಎಂಬ ಭಾವನೆಯೊಂದಿಗೆ, ಸಮಾಜಕ್ಕೆ ಒಳಿತನ್ನು ಮಾಡಲು ಸಂತರಾಗಿ ಬದಲಾದವರು ಕನಕದಾಸರು.


ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲು, ಬಹಳಷ್ಟು ಅಧ್ಯಯನವನ್ನು ಮಾಡಿ ಸರಳವಾಗಿ ಅರ್ಥವಾಗುವಂತಹ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ. ಸಮಾಜದ ಮುನ್ನಡೆಗಾಗಿ, ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಮತ್ತು ಮೂಢನಂಬಿಕೆಯ ವಿರುದ್ಧವಾಗಿ ಬಹಳಷ್ಟು ಹೋರಾಟವನ್ನು ನಡೆಸಿ ನಾವೆಲ್ಲರೂ ಒಂದೇ ಎಂಬುದನ್ನು ಪ್ರತಿಪಾದಿಸಿದವರು ಕನಕದಾಸರು ಎಂದು ಜಿಲ್ಲಾಧಿಕಾರಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ದೇವನಹಳ್ಳಿ ತಾಲ್ಲೂಕಿನ ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಯ್ಯ ಅವರು ಸಂತಕವಿ ಕನಕದಾಸರ ಜೀವನ, ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಎಂಬಿಬಿಎಸ್ ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರಕ ಪಠ್ಯ *ಬೆಳಗು* ಪುಸ್ತಕವನ್ನು ಮಾನ್ಯ ಸಚಿವರು ಬಿಡುಗಡೆ ಮಾಡಿದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸರ ವೃತ್ತದಿಂದ ಡಾ.ಬಿ‌.ಆರ್.ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ದಾಸ ಶ್ರೇಷ್ಠ ಕನಕದಾಸರ ಉತ್ಸವ, ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳಾದ ಡಾ. ಕೆ ಎನ್ ಅನುರಾಧ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಅಪರ ಪೋಲಿಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ ಬಿ, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ದೇವನಹಳ್ಳಿ ವಿಭಾಗದ ಡಿ.ವೈ.ಎಸ್.ಪಿ ರವಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ. ರಾಜಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ ಕೃಷ್ಣಮೂರ್ತಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ರಮೇಶ್, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಸಮುದಾಯದ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.