ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸರ್ವತೋಮುಖ ಅಭಿವೃದ್ಧಿಯೆಡೆಗೆ ಮಹತ್ವದ ಹೆಜ್ಜೆ: ಅಮಿತ್ ಶಾ

ವಿಜಯ ದರ್ಪಣ ನ್ಯೂಸ್

ಬಂಡುಕೋರ ಉಲ್ಫಾ ಸಂಘಟನೆಯ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದು ಅಸ್ಸಾಂನಲ್ಲಿ ಶಾಶ್ವತ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ ಎಂದರು. ಕೇಂದ್ರ ಸರ್ಕಾರ, ಅಸ್ಸಾಂ ರಾಜ್ಯ ಸರ್ಕಾರ ಮತ್ತು ಉಲ್ಫಾವನ್ನು (Uಐಈಂ) ಒಳಗೊಂಡಿರುವ ತ್ರಿಪಕ್ಷೀಯ ಒಪ್ಪಂದವು ಈ ಪ್ರದೇಶದಲ್ಲಿ ದಶಕಗಳ ಕಾಲದಿಂದಿದ್ದ ಹಿಂಸಾಚಾರದ ಅಂತ್ಯವನ್ನು ಸೂಚಿಸುವುದರ ಜೊತೆಗೆ ಅಸ್ಸಾಂನಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಮತ್ತು ಸೌಹಾರ್ದತೆಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಪ್ರದೇಶದಲ್ಲಿ ಹಿಂಸಾಚಾರದ ಕರಾಳ ಅಧ್ಯಾಯವನ್ನು ಕೊನೆಗೊಳಿಸಲು ಗೃಹ ಸಚಿವ ಅಮಿತ್ ಶಾರವರ ನೇತೃತ್ವದಲ್ಲಿ ಶ್ಲಾಘನೀಯ ಪ್ರಯತ್ನಗಳು ನಡೆಯುತ್ತಿವೆ. ಡಿಸೆಂಬರ್ 29, 2023 ರಂದು ಸಹಿ ಹಾಕಲಾದ ಈ ತ್ರಿಪಕ್ಷೀಯ ಶಾಂತಿ ಒಪ್ಪಂದವು ಈಶಾನ್ಯ ರಾಜ್ಯಗಳಲ್ಲಿನ ದಶಕಗಳಷ್ಟು ಹಳೆಯದಾದ ಬಂಡಾಯವನ್ನು ಕೊನೆಗೊಳಿಸಲಿದೆ.

ದೀರ್ಘ ಕಾಲದಿಂದ ಉಲ್ಫಾ ಹಿಂಸಾಚಾರದಿಂದ ಬಳಲುತ್ತಿದ್ದ ಅಸ್ಸಾಂನಲ್ಲಿ 1979 ರಿಂದ ಸಾವಿರಾರು ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ. ಭಯೋತ್ಪಾದನೆಯನ್ನು ಮಾನವೀಯತೆಯ ದೊಡ್ಡ ಶತ್ರು ಎಂದು ಪರಿಗಣಿಸಿರುವ ಶಾ ಅವರ ನೀತಿಗಳು ಉಲ್ಫಾ ಬಂಡುಕೋರರು ಹಿಂಸಾಚಾರವನ್ನು ತ್ಯಜಿಸಲು, ಸಂಘಟನೆಯನ್ನು ವಿಸರ್ಜಿಸಲು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸೇರಲು ಕಾರಣವಾದವು. ಸಶಸ್ತ್ರ ಹೋರಾಟವನ್ನು ತ್ಯಜಿಸಿದ ಸದಸ್ಯರನ್ನು ಮುಖ್ಯವಾಹಿನಿಗೆ ತರಲಾಗುತ್ತಿದ್ದು, ಅವರ ಸೇರ್ಪಡೆಗಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮೋದಿ – ಶಾ ಜೋಡಿ ಮಾಡುತ್ತಿದೆ.

ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಗೃಹ ಸಚಿವರ ಈ ನಿರ್ಣಾಯಕ ಹೆಜ್ಜೆ ಇಡೀ ಈಶಾನ್ಯದ ಭವಿಷ್ಯದ ಅಭಿವೃದ್ಧಿಗೆ ಮೈಲಿಗಲ್ಲಾಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಒಂದರ ನಂತರೊಂದರಂತೆ ನಿರಂತರವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿರುವ ಶಾರವರ ಪ್ರಯತ್ನಗಳು ಹಿಂಸಾಚಾರ ಮತ್ತು ಭಯೋತ್ಪಾದನೆ ಮುಕ್ತ ಭಾರತದ ಸೃಷ್ಟಿಗೆ ಕೊಡುಗೆ ನೀಡುತ್ತಿವೆ. ಅವರ ನೀತಿಗಳ ಫಲಸ್ವರೂಪವೆಂಬಂತೆ ಈಶಾನ್ಯದಲ್ಲಿ 9,000 ಕ್ಕೂ ಹೆಚ್ಚು ಬಂಡುಕೋರರು ಸಶಸ್ತ್ರ ಹೋರಾಟವನ್ನು ತೊರೆದು ರಾಷ್ಟ್ರದೆಡೆಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದಾರೆ, ಮತ್ತು ಅವರು ಸುರಕ್ಷಿತ ಮತ್ತು ಸಮೃದ್ಧ ರಾಷ್ಟ್ರದ ನಿರ್ಮಾಣದಲ್ಲಿ ಗಮನಾರ್ಹವಾದ ಕೊಡುಗೆಯನ್ನು ನೀಡಲಿದ್ದಾರೆ.

ಕಳೆದ ಒಂಬತ್ತು ವರ್ಷಗಳ ಸಾಧನೆಗಳನ್ನು ನಾವೊಮ್ಮೆ ತಿರುಗಿ ನೋಡಿದಾಗ, ದೇಶವು ಸುರಕ್ಷಿತ ಕೈಯಲ್ಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೋದಿ ಮತ್ತು ಶಾ ಸಮರ್ಥ ನೇತೃತ್ವದಲ್ಲಿ ಭಯೋತ್ಪಾದನೆಯ ಪರಿಣಾಮಕಾರಿಯಾಗಿ ನಿಗ್ರಹದೊಂದಿಗೆ, ಭಾರತವು ಉಜ್ವಲ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯಕ್ಕಾಗಿ ಸನ್ನದ್ಧವಾಗಿದೆ.