ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು……

ವಿಜಯ ದರ್ಪಣ ನ್ಯೂಸ್

ಎಳ್ಳು ಬೆಲ್ಲ ತಿಂದು
ಒಳ್ಳೆಯ ಮಾತಾಡು……

ಸಂಕ್ರಾಂತಿಯ ಸವಿ ನುಡಿಯಿದು…..

ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ……

ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ .

ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ .

ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ.

ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ .

ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ,
ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ.

ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ,
ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ.

ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ,
ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ.

ಎಲ್ಲವೂ ನಿಮಗಾಗಿ,
ನೀವು ಮಾತ್ರ ಇತರರಿಗಾಗಿ.

ಮುಖವಾಡ ಮನಸ್ಥಿತಿ ಕಡಿಮೆ ಮಾಡಿ,
ವಾಸ್ತವ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿ.

ಭಕ್ತಿ ಇರುವ, ನಂಬಿಕೆ ಇರುವ ವ್ಯಕ್ತಿಗಳು ನೀವಾಗಿದ್ದರೆ ಮಂದಿರವೋ ಮಸೀದಿಯೋ ಚರ್ಚೋ ಗುರುದ್ವಾರವೋ ಜೈನ ಬಸದಿಯೋ ಬೌದ್ದ ಸ್ತೂಪವೋ ಏನಾದರಾಗಿರಲಿ ಒಮ್ಮೆ ನಮಸ್ಕರಿಸಿ ಮುನ್ನಡೆಯಿರಿ. ಅದು ನಿಜವಾದ ದೈವ ಭಕ್ತಿ. ನಿಮ್ಮ ನಿಮ್ಮ ಧರ್ಮದ ದೇವರು ದೇವಸ್ಥಾನಗಳಿಗೆ ಮಾತ್ರ ನಿಮ್ಮ ನಿಷ್ಠೆ ಎಂದಾದರೆ ನೀವು ದೈವಕ್ಕೇ ಅಪಚಾರ ಮಾಡಿದಂತೆ…..

ಬದುಕೆಂಬ ಅನಂತದಲ್ಲಿ……

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ,
ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ,

ಮೆಚ್ಚುವವರಿಗೆ ಬರವಿಲ್ಲ,
ಟೀಕಿಸುವವರು ಕಡಿಮೆಯೇನಿಲ್ಲ,

ಅಸೂಯೆ ಒಳಗೊಳಗೆ,
ಕುಹುಕ ಮೇಲಿನ ಹೊದಿಕೆ,

ಎತ್ತಿ ಕಟ್ಟುವವರು ಹಲವರು,
ಎಚ್ಚರಿಸುವವರು ಕೆಲವರು,

ಹೃದಯ ತಟ್ಟುವವರು ಇದ್ದಾರೆ,
ಬೆನ್ನಿಗೆ ಇರಿಯುವವರೂ ಉಂಟು,

ಧೈರ್ಯ ತುಂಬುವವರು,
ಭಯ ಪಡಿಸುವವರು,
ಜೊತೆಯಾಗುವವರು,
ದೂರ ಸರಿಯುವವರು,
ಸ್ವಾಗತಿಸುವವರು,
ವಿರೋಧಿಸುವವರು,

ತಪ್ಪು ಅರ್ಥೈಸಿಕೊಂಡವರು,
ನಿಜದ ಅನುಭಾವಿಗಳು,
ಪೂರ್ವಾಗ್ರಹ ಪೀಡಿತರು,
ವಿಶಾಲ ದೃಷ್ಟಿಯವರು,
ಮಜಾ ತೆಗೆದುಕೊಳ್ಳುವವರು,
ಹಿತ ಬಯಸುವವರು,

ನಿರ್ಲಿಪ್ತರು – ನಿರ್ಲಕ್ಷ್ಯಿಸುವವರು,
ಹಿಂಸಾವಾದಿಗಳು ಕರುಣಾಮಯಿಗಳು,
ಮೇಲೆತ್ತುವವರು,
ಕೆಳಗೆ ತುಳಿಯುವವರು,
ಸ್ವಾಭಿಮಾನಿಗಳು,
ಮಾರಿಕೊಂಡವರು,

ಮುಖವಾಡ ಧರಿಸಿರುವವರು,
ಸಹಜ ಸ್ವಭಾವದವರು,
ಆಕ್ರೋಶ ನುಡಿಯ ಮಾತುಗಳು
ಮೆಲು ಧ್ವನಿಯ ವಿನಯಿಗಳು,
ನಗುನಗುತ್ತಾ ಅಳಿಸುವವರು,
ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು,

ನಿಜ ವೀರರು,
ರಣ ಹೇಡಿಗಳು,
ಬಹುಮಾನಿಸುವವರು,
ಅವಮಾನಿಸುವವರು,
ಪ್ರೇರೇಪಿಸುವವರು,
ಪ್ರಚೋದಿಸುವವರು,
ತ್ಯಾಗಿಗಳು – ಸ್ವಾರ್ಥಿಗಳು,
ಜಾಣ ಪೆದ್ದರು – ಪೆದ್ದ ಜಾಣರು,

ನವ ರಸಗಳು,
64 ವಿದ್ಯೆಗಳು,
ಊಹೆಗೂ ನಿಲುಕದ ಮನಸುಗಳು……

18 ರ ಕನಸುಗಳು,
30 ರ ಆಸೆಗಳು,
50 ರ ಭರವಸೆಗಳು,
70 ರ ನೋವುಗಳು,
ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು,

ನಮ್ಮ ತನವೂ ಇರಬೇಕು,
ಹೊಂದಾಣಿಕೆಯೂ ಆಗಬೇಕು,
ಸಹಕಾರವೂ ಸಿಗಬೇಕು…..
ವೈವಿಧ್ಯತೆಯೂ ಬೆರೆಯಬೇಕು,
ಅತಿರೇಕಗಳ ನಡುವೆ ಸಮನ್ವಯ.. ‌…

ಈ ಎಲ್ಲದರ ನಡುವೆ ‌ವಾಸ್ತವದ ಬದುಕು,
ವ್ಯಾವಹಾರಿಕ ಬದುಕು, ನೆಮ್ಮದಿಯ ಜೀವನದ ಹುಡುಕಾಟ…….

ವಯಸ್ಸಿನ ಅಂತರ,
ಹಣಕಾಸಿನ ವ್ಯತ್ಯಾಸ,
ಜಾತಿಯ ಕಂದರ,
ವಿದ್ಯೆಯ ಭಿನ್ನತೆ,
ಅಧಿಕಾರದ ಅಸಮಾನತೆ,

ಬರುವವರಿಗೆ ಸ್ವಾಗತ,
ಹೋಗುವವರಿಗೆ ವಂದನೆಗಳು,

ಮೆಚ್ಚುವವರಿಗೆ ಧನ್ಯವಾದಗಳು,
ಟೀಕಿಸುವವರಿಗೆ ನಮಸ್ಕಾರಗಳು,

ಅಭಿಮಾನಿಸುವವರಿಗೆ ಕೃತಜ್ಞತೆಗಳು,
ಅಸೂಯೆಪಡುವವರಿಗೆ ಸಹಾನುಭೂತಿಗಳು,

ಪ್ರೀತಿಸುವವರಿಗೆ ನಗು,
ದ್ವೇಷಿಸುವವರಿಗೆ ನಿರ್ಲಕ್ಷ್ಯ,

ಸಹಾಯ ಮಾಡುವವರಿಗೆ ಸಲಾಂ,
ತೊಂದರೆ ಕೊಡುವವರಿಗೆ ಗುಡ್ ಬೈ,

ಆತ್ಮೀಯರಿಗೊಂದಷ್ಟು ಅಪ್ಪುಗೆ,
ಪರಿಚಿತರಿಗೊಂದಷ್ಟು ಸಲುಗೆ,

ಪ್ರೋತ್ಸಾಹಿಸುವವರಿಗೆ ನಮನಗಳು,
ಕಾಲೆಳೆಯುವವರಿಗೆ ತಿರಸ್ಕಾರಗಳು,

ಜೊತೆಯಾಗುವವರಿಗೆ
ಯಶಸ್ಸಾಗಲಿ,
ದೂರಾಗುವವರಿಗೆ ಒಳ್ಳೆಯದಾಗಲಿ,

ಗೆದ್ದವರಿಗೆ ಅಭಿನಂದನೆಗಳು,
ಸೋತವರಿಗೆ ಹಿತ ನುಡಿಗಳು,

ಹೀಗೆ, ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು….

ಸಾಗುತ್ತಲೇ ಇರಲಿ ಜೀವನ…..

ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌……….

ಬದುಕನ್ನು ಬಯಸುವವರಿಗೆ,
ಹೆದರಿಕೆ, ನಾಚಿಕೆ, ಅವಮಾನ,
ಆಸೆ ಇರುತ್ತದೆ,
ಸಾವನ್ನೇ ಸ್ವಾಗತಿಸುವವರಿಗೆ…….

ಹೀಗೆ ಬದುಕೊಂದು ಊಹೆಗೆ ನಿಲುಕದ ಅನಂತದೆಡೆಗೆ ಪಯಣ…….

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಮಕರ ಸಂಕ್ರಮಣದ ಶುಭಾಶಯ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್. ಕೆ.
9844013068…….