ಪರಸಂಗದ ಗೆಂಡೆತಿಮ್ಮ ಮರುಪ್ರದರ್ಶನ…

ವಿಜಯ ದರ್ಪಣ ನ್ಯೂಸ್ ….
ಓದಿನರಮನೆಯಲ್ಲಿ ತಿಂಗಳ ಒನಪು ೧೮೯ ಪರಸಂಗದ ಗೆಂಡೆತಿಮ್ಮ ಮರುಪ್ರದರ್ಶನ
ಬೆಂಗಳೂರು:ಆಧುನಿಕತೆ ಎಂಬುದು ಎಂಥವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು, ಕೆಲವೊಮ್ಮೆ ಆವಾಂತರಗಳನ್ನು ಸೃಷ್ಟಿಸಿದರೆ ಮತ್ತೆ ಕೆಲವೊಮ್ಮೆ ಹೊಸ ಸವಾಲುಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಅಂತಹದ್ದೊಂದು ವಿಚಾರ ಪೂರಿತ ವಸ್ತುವನ್ನಿಟ್ಟುಕೊಂಡು ಕನ್ನಡದ ಜನಪ್ರಿಯ ಕಾದಂಬರಿಕಾರ ದಿವಂಗತ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ನಾಟಕವನ್ನು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಗರದ ರೂಪಾಂತರ ತಂಡದ ಮೂವತ್ತು ಕಲಾವಿದರು ಅತ್ಯಂತ ಯಶಸ್ವಿಯಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಸೂರೆಗೊಂಡಿತು.
ಇದೇ ವೇದಿಕೆಯಲ್ಲಿ ನಾಟಕ ರೂಪಾಂತರಿಸಿದ ಡಾ. ಎಂ. ಬೈರೇಗೌಡ ಅವರನ್ನು ರೂಪಾಂತರ ತಂಡದ ಪರವಾಗಿ ಸನ್ಮಾನಿಸಿದವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ.
ಪರಸಂಗದ ಗೆಂಡೆತಿಮ್ಮ ಮತ್ತು ಮರಂಕಿ ಇವರಿಬ್ಬರ ದುರಂತಕತೆ ಸಂಭವಿಸಿ ಅರ್ಧ ಶತಮಾನವೇ ಕಳೆದಿದೆ. ಸಾಲುಂಡಿ-ಗೌವಳ್ಳಿಯಲ್ಲಿ ಅವರಿಬ್ಬರ ಸಾವಿನ ಸುದ್ಧಿ ಹಸಿಹಸಿಯಾಗಿಯೇ ಇದೆ. ಗೌವಳ್ಳಿಯಂತ ಯಾವುದೆ ಕೊಂಪೆಗೆ ಹೋದರೂ ಮರಂಕಿಯಂಥವರು ಬಿತ್ತಿದ ಬಯಕೆಗಳು ಬೆಳೆದು ಹೂಬಿಟ್ಟು ನಿಂತಿವೆ. ಗೌವಳ್ಳಿಗೆ ಬಸ್ಸಿನ ದಾರಿ ಆಗಿ, ಊರ ಹಿರಿಯರು ಎಷ್ಟೇ ತಡೆದರೂ ಲೆಕ್ಕಿಸದೆ ಅವರ ಕಲ್ಪನೆಯ ಅನಿಷ್ಠಶಕ್ತಿಗಳು ನುಗ್ಗಿ ಆಕ್ರಮಿಸಿ ಸ್ವತಃ ಊರೇ ತಾನಾಗಿ ಎಲ್ಲ ಶಕ್ತಿಗಳನ್ನೂ ಆವಾಹನೆಗೊಳ್ಳುತ್ತಿದೆ. ಇವತ್ತಿಗೂ ಗೌವಳ್ಳ್ಳಿ-ಸಾಲುಂಡಿಗಳಲ್ಲಿ ಯಾರನ್ನಾದರೂ ಗೆಂಡೆತಿಮ್ಮ-ಮರಂಕಿಯರ ಬಗ್ಗೆ ಪ್ರಶ್ನಿಸಿದರೆ ಅವರಿಬ್ಬರ ದುರಂತ ನೆನೆದು ನಿಟ್ಟುಸಿರು ಬಿಡುವುದನ್ನು ಕಾಣಬಹುದು. ಕಾಲ ಸರಿದರೂ ಮರಂಕಿ ಗೆಂಡೆತಿಮ್ಮನ ಜೀವನಗಾಥೆ ಅಚ್ಚ ಹಸಿರಾಗಿಯೇ ಇದೆ…
ಅರ್ಥಗರ್ಭಿತವಾದ ಈ ಮಾತುಗಳಿಗೆ ಸಾಕ್ಷಿ ಎಂಬಂತೆ ವಿಸ್ತಾರವಾದ ಕಥಾಹಂದರವನ್ನು ಹೊಂದಿರುವ ಅತ್ಯಂತ ಆಪ್ತವಾಗಿ  ಪರಸಂಗದ ಗೆಂಡೆತಿಮ್ಮ ಕಾದಂಬರಿಯನ್ನು ನಾಟಕರೂಪಕ್ಕೆ ತಂದವರು ನಾಡಿನ ಹೆಸರಾಂತ ನಾಟಕಕಾರ, ಕವಿ, ಗಾಯಕ, ನಿರ್ದೇಶಕ, ನಟ, ಸಂಘಟಕ ಡಾ. ಎಂ. ಬೈರೇಗೌಡ. ರಂಗರೂಪಕ್ಕೆ ಒಂದು ರೂಪ ಕೊಟ್ಟು ಕಲಾವಿದರನ್ನು ತಿದ್ದಿ ತೀಡಿ ಶುದ್ಧಗೊಳಿಸಿ ಅಚ್ಚುಕಟ್ಟಾದ ಅಡುಗೆಯಾಗಿಸಿ ಕಲಾಕ್ಷೇತ್ರದ ವೇದಿಕೆಯಲ್ಲಿ ಉಣಬಡಿಸಿದವರು ರೂಪಾಂತರ ಕೆ.ಎಸ್.ಡಿ.ಎಲ್. ಚಂದ್ರು.
ಗೆಂಡೆತಿಮ್ಮನ ಪಾತ್ರ ನಿರ್ವಹಿಸಿದ ಮುರುಡಯ್ಯ ಅಭಿಜಾತ ಕಲಾವಿದನೆಂಬ ಮಾತನ್ನು ಸಬೀತುಪಡಿಸಿದರು. ನಾಟಕದ ನಂತರವೂ ಪಾತ್ರದೊಳಗೇ ಉಸಿರಾಡಿದ ಅವರ ನಟನೆ ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ. ಬೇದಿಯಮ್ಮನ ಪಾತ್ರದಲ್ಲಿ ಮಂಜುಳ ಮಿಂಚಿದರು. ಮರಂಕಿಯಾಗಿ ಕಲಾವಿದೆ…. ಅವರು ಸಮರ್ಥವಾಗಿ ನಿಭಾಯಿಸಿದರು.
ಹಿರಿಯ ರಂಗಭೂಮಿ, ಹಿರಿತೆರೆ, ಕಿರುತೆರೆ ನಟ ವೆಂಕಟಾಚಲ ಅವರ ಪಾತ್ರದ ಲವಲವಿಕೆ, ಎಲ್ಲ ಪೋಷಕ ಪಾತ್ರಗಳು ಮುಖ್ಯ ಭೂಮಿಕೆಗೆ ಹೊದ ಮೆರುಗನ್ನು ತಂದುಕೊಟ್ಟರು. ಇಲ್ಲಿನ ಒಂದೊಂದು ದೃಶ್ಯವೂ ಕುತೂಹಲ ಕೆರಳಿಸುವುದರ ಜೊತೆಗೆ ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಯಶಸ್ಸನ್ನು ಕಂಡಿದೆ. ದೇಸೀ ಮೋಹನ್ ಅವರ ಸಂಗೀತದ ಮಾಧುರ್ಯ, ಟಿ.ಎಂ. ನಾಗರಾಜು ಅವರ ಬೆಳಕಿನ ನಿರ್ವಹಣೆ, ರೂಪಾಂತರದ ರಾಜು ಅವರ ನಿರ್ವಹಣೆ, ಕೆ. ಗಂಗಾಧರ ಅವರ ವಿನ್ಯಾಸ, ಸಹನಿರ್ದೇಶಕ ಎನ್. ರಾಮಚಂದ್ರ ಎಲ್ಲರ ಶ್ರಮ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು.
ಪರಸಂಗದ ಗೆಂಡೆತಿಮ್ಮ ನಾಟಕದ ಮರುಪ್ರದರ್ಶನವು 11ನೇ ಜೂನ್ 2024ರಂದು ಸಂಜೆ 6.30ಕ್ಕೆ ಹಂಪಿನಗರ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣ ಸಭಾಂಗಣದಲ್ಲಿ ನಡೆಯಲಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಳೆದ 189 ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಸರಿಣಿಯಲ್ಲಿ ಪ್ರದರ್ಶನವಾಗುತ್ತಿದೆ ಎಂದು ಕೆ.ಎಸ್.ಎಂ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಡಾ. ಎಂ. ಬೈರೇಗೌಡ 
9448102158