ಶಿಡ್ಲಘಟ್ಟ ನಗರಸಭೆಯ 7 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ
ವಿಜಯ ದರ್ಪಣ ನ್ಯೂಸ್…..
ಶಿಡ್ಲಘಟ್ಟ ನಗರಸಭೆಯ 7 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ
ಶಿಡ್ಲಘಟ್ಟ : ನಗರಸಭೆ ಅಧ್ಯಕ್ಷ ಮತ್ತು ಉಪಾದ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ 7 ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯವು 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದೆ.
ಕಳೆದ 2024 ರ ಸೆಪ್ಟೆಂಬರ್ ತಿಂಗಳಿನ 5 ನೇ ದಿನಾಕದಂದು ನಡೆದ ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಕಾಂಗ್ರೆಸ್ ನ 7 ಮಂದಿ ಸದಸ್ಯರ ವಿರುದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹಾಗು ನಗರಸಭೆ ಸದಸ್ಯ ಎಂ.ಶ್ರೀನಿವಾಸ್ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನಲೆಯಲ್ಲಿ ಸೋಮವಾರ 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಅನರ್ಹಗೊಂಡ ನಗರಸಭೆ ಸದಸ್ಯರು -::->
ನಗರಸಭೆಯ 3 ನೇ ವಾರ್ಡಿನ ಸದಸ್ಯೆ ಎಸ್.ಚಿತ್ರಮನೋಹರ್, 10 ನೇ ವಾರ್ಡಿನ ಸದಸ್ಯ ಎಸ್.ಎಂ.ಮಂಜುನಾಥ್, 11 ನೇ ವಾರ್ಡಿನ ಸದಸ್ಯ ಎಲ್.ಅನಿಲ್ಕುಮಾರ್, 16 ನೇ ವಾರ್ಡಿನ ಎನ್.ಕೃಷ್ಣಮೂರ್ತಿ, 22 ನೇ ವಾರ್ಡಿನ ಟಿ.ಮಂಜುನಾಥ್, 28 ನೇ ವಾರ್ಡಿನ ಜಭೀಉಲ್ಲಾ ಮತ್ತು 7 ನೇ ವಾರ್ಡಿನ ಶಿವಮ್ಮ ಮುನಿರಾಜು ಅನರ್ಹಗೊಂಡವರು..
ಕಳೆದ 2024 ರ ಸೆಪ್ಟೆಂಬರ್ 5 ರಂದು ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ನ ರೂಪ ನವೀನ್ ಚುನಾಯಿತರಾದರು.
ಆಗ ಸಂಖ್ಯಾಬಲವಿದ್ದರೂ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಾಳಯ ಸೋಲು ಅನುಭವಿಸಿ ಆ ವೇಳೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಏಳು ಮಂದಿ ಕಾಂಗ್ರೆಸ್ ಸದಸ್ಯರು ಬೆಂಬಲಿಸಿದ ಕಾರಣ ಗೆಲುವಾಗಿತ್ತು.
ಅಧ್ಯಕ್ಷಸ್ಥಾನಕ್ಕೆ ಜೆಡಿಎಸ್ ನ 9ನೇ ವಾರ್ಡ್ ನ ವೆಂಕಟಸ್ವಾಮಿ, ಕಾಂಗ್ರೆಸ್ನ ಎಂ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಜೆಡಿಎಸ್ ನ ರೂಪ ನವೀನ್ ಮತ್ತು ಕಾಂಗ್ರೆಸ್ ನಿಂದ ಸಲ್ಮಾತಾಜ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೂಪ ನವೀನ್ ಅವರು ಶಾಸಕ ಹಾಗೂ ಸಂಸದರ ತಲ್ಲಾ ಒಂದೊಂದು ಮತ ಸೇರಿದಂತೆ ಒಟ್ಟು ತಲಾ 21 ಮತಗಳನ್ನು ಪಡೆಯುವ ಮೂಲಕ ವಿಜಯ ಸಾಧಿಸಿದ್ದರು. 10 ಮತಗಳನ್ನು ಪಡೆದು ಕಾಂಗ್ರೆಸ್ ನ ಎಂ.ಶ್ರೀನಿವಾಸ್ ಮತ್ತು ಸಲ್ಮಾತಾಜ್ ಪರಾಭವಗೊಂಡಿದ್ದರು.
ನಗರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್-10, ಬಿಜೆಪಿ-2, ಬಿಎಸ್ಪಿ-2 ಹಾಗೂ ಸ್ವತಂತ್ರರು-4 ಸೇರಿ ಒಟ್ಟು 31 ಸಂಖ್ಯಾಬಲವಿದೆ. ಈ ಪೈಕಿ ಕಾಂಗ್ರೆಸ್ ನ ಶಿವಮ್ಮ ಹಾಗೂ ಜೆಡಿಎಸ್ ನ ಮುಸ್ತರುನ್ನಿಸಾ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದು 29 ಸದಸ್ಯರು ಹಾಜರಾಗಿದ್ದರು, ಜೆಡಿಎಸ್ ಅಭ್ಯರ್ಥಿಗಳ ಪರ 19 ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ 10 ಮತಗಳಷ್ಟೆ ಬಿದ್ದಿದ್ದವು. ಶಾಸಕ ಬಿ.ಎನ್.ರವಿಕುಮಾರ್, ಸಂಸದ ಮಲ್ಲೇಶ್ಬಾಬು ಜೆಡಿಎಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದರು.