ವಿಜಯ ದರ್ಪಣ ನ್ಯೂಸ್…
ಬಾಗಲಕೋಟೆ ಜಿಲ್ಲೆಯಲ್ಲಿ ಜು.೨೧ರಂದು ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮ
ಭೂ ಸ್ವಾಧೀನ ೨೦೧೩ರ ಕಾಯಿದೆ ಮರು ಜಾರಿಗೆ ಹಕ್ಕೊತ್ತಾಯ ಮಾಡಲಾಗುವುದು : ಭಕ್ತರಹಳ್ಳಿ ಬೈರೇಗೌಡ

ಶಿಡ್ಲಘಟ್ಟ : ಕೃಷಿ ಮತ್ತು ಕೃಷಿಕರ ಪರ ನಡೆದ ಹೋರಾಟಗಳಲ್ಲಿ ಹುತಾತ್ಮರಾದ ರೈತರು, ರೈತ ನಾಯಕರಿಗೆ ಶ್ರದ್ಧಾಂಜಲಿ, ಪುಷ್ಪ ನಮನಗಳನ್ನು ಸಲ್ಲಿಸಲು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಜು.೨೧ರಂದು ಬೃಹತ್ ಕಾರ್ಯಕ್ರಮ ಏರ್ಪಡಿಸಿದೆ ಎಂದು ಹಸಿರು ಸೇನೆ ಮತ್ತು ರೈತ ಸಂಘದ
ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣ ಬಳಿಯಿರುವ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗದಗಜಿಲ್ಲೆಯ ನವಲಗುಂದ ಮತ್ತು ನರಗುಂದದಲ್ಲಿನ ಹುತ್ಮಾತ್ಮ ಸ್ಥೂಪಗಳಿಗೆ ನಮಿಸಿ ಪುಷ್ಪ ನಮನಗಳನ್ನು ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುವುದು ಎಂದರು.
ನಂತರ ಮಹಾಲಿಂಗಪುರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ರಾಜ್ಯದ ಎಲ್ಲಾ ಕಡೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ರೈತರು ಹಾಗೂ ಎಲ್ಲ ರೈತ ನಾಯಕರು ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯ ನವಿಲಾವತಿ ಡ್ಯಾಂ ನಿರ್ಮಿಸಿದರೂ ಸ್ಥಳೀಯರಿಗೆ ಬೇಸಿಗೆಯಲ್ಲಿ ನೀರು ಸಿಗಲಿಲ್ಲ. ನೀರಿನ ಕಂದಾಯ ವಿಧಿಸಿದಾಗ ರೈತರು ನಡೆಸಿದ ಹೋರಾಟದಲ್ಲಿ ಹುತಾತ್ಮರಾದ ರೈತರು ಸೇರಿದಂತೆ ರಾಜ್ಯದಲ್ಲಿ ನಡೆದ ಕೃಷಿ ಮತ್ತು ರೈತರ ಪರ ಹೋರಾಟದಲ್ಲಿ ಹುತಾತ್ಮರಾದ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸಲಾಗುವುದು ಎಂದರು.
ಅನಂತರ ನಡೆಯುವ ಸಭೆಯಲ್ಲಿ ಸಧ್ಯ ರಾಜ್ಯ ಮತ್ತು ರಾಷ್ಟçದಲ್ಲಿ ರೈತರು ಮತ್ತು ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು, ಸಂಕಷ್ಟಗಳ ಬಗ್ಗೆ ಚರ್ಚಿಸಲಾಗುವುದು. ಮುಖ್ಯವಾಗಿ ರೈತರ ಭೂ ಸ್ವಾಧೀನ-೨೦೧೩ರ ಭೂ ಕಾಯಿದೆಯನ್ನು ಮರು ಜಾರಿ ಮಾಡಲು ಸರಕಾರದ ಮೇಲೆ ಒತ್ತಡ ಹಾಕುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಹಕ್ಕೊತ್ತಾಯ ಮಾಡಲಾಗುವುದು ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ನೂರಾರು ರೈತರು ಬಾಗಲಕೋಟೆಯ ಮಹಾಲಿಂಗಪುರದಲ್ಲಿ ನಡೆಯುವ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಗುಡಿಹಳ್ಳಿ ಕೆಂಪಣ್ಣ ಹಾಜರಿದ್ದರು.









