ರೈತರಿಗೆ ಅನುಕೂಲವಾಗಲು ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ : ಶಾಸಕ ಬಿ.ಎನ್.ರವಿಕುಮಾರ್
ವಿಜಯ ದರ್ಪಣ ನ್ಯೂಸ್….
ರೈತರಿಗೆ ಅನುಕೂಲವಾಗಲು ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ : ಶಾಸಕ ಬಿ.ಎನ್.ರವಿಕುಮಾರ್
ಶಿಡ್ಲಘಟ್ಟ : ನಗರದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳೊಂದಿಗೆ ಅವರು ಸಂತೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ 4 ಕೋಟಿ 65 ಲಕ್ಷ ರೂ.ಗಳನ್ನು ಈ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿಡಲಾಗಿದ್ದು, ಬೆಳಗಾವಿಯಲ್ಲಿ ನಿರ್ಮಿಸಿರುವ ಸಂತೆ ಮೈದಾನದ ಮಾದರಿಯಲ್ಲಿ ನಗರದ ಸಂತೆ ಮೈದಾನವನ್ನು ರೂಪಿಸಲು ಅಧಿಕಾರಿಗಳಿಗೆ ವಿವರಿಸಿದರು.
ದಿನಪೂರ್ತಿ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಮೇಲ್ಟಾವಣಿ ನಿರ್ಮಾಣ ಅಗತ್ಯವಿದೆ ಎಂದರು.
ಇದರೊಂದಿಗೆ ಊಟದ ಕ್ಯಾಟೀನ್, ಶೌಚಾಲಯ,ವಾಹನ ನಿಲುಗಡೆ ಸ್ಥಳ ಹಾಗೂ ಸ್ವಚ್ಛತಾ ವ್ಯವಸ್ಥೆಗಳನ್ನು ತುರ್ತಾಗಿ ಕಲ್ಪಿಸಬೇಕು ಹಾಗು ಮಳೆಗಾಲದಲ್ಲಿ ನೀರು ನಿಂತುಕೊಳ್ಳದಂತೆ ಸಮರ್ಪಕ ನೀರು ಹರಿವಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಸಂತೆಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಿ ಗೇಟ್ ಅಳವಡಿಸಲು ಹಾಗೂ ಈ ಸಂಬಂಧಿತ ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ಸದಸ್ಯ ಅನಿಲ್ ಕುಮಾರ್, ಪೌರಾಯುಕ್ತೆ ಜಿ.ಅಮೃತ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರೆ ಮಾಧವಿ, ಎಇಇ ರಘುನಾಥ್, ಮುಖಂಡ ತಾದೂರುರಘು, ಜಿಲ್ಲಾ ಸಹಕಾರಿ ಸಂಘದ ಮುರಳಿ ,ನವೀನ್ ಮತ್ತೀತರರಿದ್ದರು.