ಭಾರತ್ ಮುಷ್ಕರ: ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್….
ಭಾರತ್ ಮುಷ್ಕರ: ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ತಾಂಡವಪುರ ಫೆಬ್ರುವರಿ 12: ಕೇಂದ್ರಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ದೇಶವ್ಯಾಪಿ ಕರೆ ನೀಡಿದ್ದ ಭಾರತ್ ಮುಷ್ಕರ ಬೆಂಬಲಿಸಿ ಮೈಸೂರಿನಲ್ಲೂ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಮುಷ್ಕರ ನಡೆಯಿತು. ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಮಿಕರು ಓಲ್ಡ್ ಬ್ಯಾಂಕ್ ರಸ್ತೆ ಮಾರ್ಗವಾಗಿ ಸಾಗಿ ನ್ಯೂ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
೪ ಲೇಬರ್ ಕೋಡ್ ರದ್ದುಗೊಳಿಸಬೇಕು. ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿ ಜಿ ರಾಮ್ ಐ ಕಾಯಿದೆ ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯಿದೆಯನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಭೂ ಸುಧಾರಣೆ, ಎಪಿಎಂಸಿ, ಜಾನುವಾರು ಸಂರಕ್ಷöಣಾ ತಿದ್ದುಪಡಿ ಕಾಯಿದೆ ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ಬೀಜ ಮಸೂದೆ ಕಾಯಿದೆಯನ್ನು ಹಿಂಪಡೆಯಬೇಕು. ವಿಮಾ ತಿದ್ದುಪಡಿ ಕಾಯಿದೆ ಶಾಂತಿ ಕಾಯ್ದೆ ರದ್ದುಗೊಳಿಸಬೇಕು. ರಾಜ್ಯ ಸರ್ಕಾರದ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಕನಿಷ್ಠ ವೇತನ ಸಲಹಾ ಮಂಡಳಿ ಸಲ್ಲಿಸಿರುವ ಶಿಫಾರಸ್ಸನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗಾಂಧಿವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಶೇಷಾದ್ರಿ ಮಾತನಾಡಿ, ದೇಶದ್ಯಂತ ಮುಷ್ಕರ ಯಶಸ್ವಿಯಾಗಿದೆ. ಹಲವು ರಾಜ್ಯಗಳಲ್ಲಿ ಮುಷ್ಕರ ಬಂದ್ ಹರತಾಳದ ಸ್ವರೂಪ ತೆಗೆದುಕೊಂಡಿದೆ. ದುಡಿಯುವ ಜನತೆ ಕೇಂದ್ರ ಸರ್ಕಾರದ ನೀತಿಗಳನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಕಾನೂನುಗಳ ತಿದ್ದುಪಡಿ ಸಂವಿಧಾನದ ಹಕ್ಕುಗಳಿಗೆ ವಿರುದ್ಧವಾಗಿದೆ. ಸಂವಿಧಾನ ಹೇಳಿರುವ ಕನಿಷ್ಠ ಕೂಲಿ ಕೊಡದಂತೆ ನೀತಿ ರೂಪಿಸಿದೆ. ದುಡಿಯುವ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಸರ್ಕಾರ ಕಿತ್ತುಕೊಳ್ಳುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಹಿಗಳು ಕಾರ್ಮಿಕರ ಶೋಷಣೆ ಮಾಡಲಿಕ್ಕೆ ಅವಕಾಶ ಕೊಡುತ್ತಿದೆ. ಇದಕ್ಕೆ ಕಾರ್ಮಿಕರು ಅವಕಾಶ ಕೊಡಬಾರದು ಎಂದು ತಿಳಿಸಿದರು.

ರೈತ ಸಂಘದ ಹೊಸಕೋಟೆ ಬಸವರಾಜು ಮಾತನಾಡಿದರು. ಹಿರಿಯ ಲೇಖಕ ನಾ.ದಿವಾಕರ, ಎಐಟಿಯುಸಿ ಜಗನ್ನಾಥ್, ಸಿಐಟಿಯು ಅಣ್ಣಪ್ಪ ಬಸವಯ್ಯ, ಎಐಯುಟಿಯುಸಿ ಚಂದ್ರಶೇಖರ ಮೇಟಿ, ಯಶೋಧರ, ಎಐಸಿಸಿಟಿಯು ಆನಂದ, ದಸಂಸದ ಬೆಟ್ಟಯ್ಯಕೋಟೆ, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ರೈತ ಸಂಘದ ಪಿ.ಮರಂಕಯ್ಯ, ಎಕೆಕೆಎಂಸ್ ಬಸವರಾಜು, ಮಹದೇವಮ್ಮ, ಬಿ.ರವಿ, ಟಿ.ಆರ್.ಸುನಿಲ್, ದೇವದಾಸ್ ಮುಂತಾದವರಿದ್ದರು.
