ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನ ಪಡೆಯಬೇಕು : ಶಾಸಕ ಬಿ.ಎನ್. ರವಿಕುಮಾರ್
ವಿಜಯ ದರ್ಪಣ ನ್ಯೂಸ್….
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನ ಪಡೆಯಬೇಕು : ಶಾಸಕ ಬಿ.ಎನ್. ರವಿಕುಮಾರ್

ಶಿಡ್ಲಘಟ್ಟ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನ ಪಡೆಯಬೇಕು ಎಂಬ ಗುರಿಯನ್ನು ನೀಡಲಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲ್ಲೂಕಿನಾದ್ಯಂತ SSLC ಪರೀಕ್ಷೆಯ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದ್ದು ಮಾರ್ಚ್-18ರಿಂದ ಪರೀಕ್ಷೆಗಳು ಆರಂಭಗೊಳಲಿವೆ ,ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪ್ರಥಮ ಸ್ಥಾನ ಪಡೆಯುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಹಾಗೂ ಜಿಲ್ಲೆಯ ಡಿಡಿಪಿಐ ರಮೇಶ್ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ ,ಸಭೆಯಲ್ಲಿ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಪರಿಕ್ಷೆ ಸಿದ್ದತೆ ಬಗ್ಗೆ ವಿವರಿಸಲಾಗಿದೆ ಎಂದರು.
ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಮೊದಲನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 12,860 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 945 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ, ಈ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.ಗಳ ಪ್ರೋತ್ಸಾಹಧನ ಹಾಗು ಆ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಿದ್ದೇನೆ ಎಂದು ಪ್ರಸ್ತಾಪಿಸಿದರು.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಗಳಿಗೆ ಸೇರಿದವರಾಗಿರುವುದರಿಂದ, ಅವರಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ,ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲಿ ಸಭೆಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಕಳೆದ ಎರಡು ವರ್ಷಗಳ ಫಲಿತಾಂಶಗಳ ಕುರಿತು ಉಲ್ಲೇಖಿಸಿದ ಅವರು, 2023-24ರಲ್ಲಿ ಕ್ಷೇತ್ರ ಮೂರನೇ ಸ್ಥಾನದಲ್ಲಿದ್ದರೆ, 2024-25ರಲ್ಲಿ ಎರಡನೇ ಸ್ಥಾನಕ್ಕೇರಿದೆ ಈ ಬಾರಿ ಮೊದಲ ಸ್ಥಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮಹನೀಯರ ಆರಾಧನಾ ಮಹೋತ್ಸವ

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಾರ್ಚ್ 5 ರಿಂದ 7ರ ವರೆಗೆ ಶ್ರೀ ಸುಧೀಂದ್ರತೀರ್ಥರ, ಶ್ರೀ ವಾದಿರಾಜರ ಮತ್ತು ಶ್ರೀ ವ್ಯಾಸರಾಜರ ಆರಾಧನಾ ಮಹೋತ್ಸವವನ್ನು ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮಗಳು : ಮಾರ್ಚ್ 5, ಗುರುವಾರ, ಶ್ರೀ ಸುಧೀಂದ್ರತೀರ್ಥರ ಮತ್ತು ಬಾಳಗಾರು ಶ್ರೀ ರಘುಮಾನ್ಯತೀರ್ಥರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಅಬ್ಬೂರು ಬದರಿ ಆಚಾರ್ಯರಿಂದ “ಶ್ರೀ ಸುಧೀಂದ್ರತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ತತ್ವಜ್ಞಾನಕ್ಕೆ ವಾಜ್ಞಯ ಕೊಡುಗೆ” ವಿಷಯವಾಗಿ ಧಾರ್ಮಿಕ ಪ್ರವಚನ.
ಮಾರ್ಚ್ 6, ಶುಕ್ರವಾರ : ಶ್ರೀ ವಾದಿರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ರುಕ್ಮಿಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಸಾಂಗ್ಲಿ ವಾಸುದೇವಾಚಾರ್ಯರಿಂದ “ಶ್ರೀ ವಾದಿರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಶ್ರೀಮದಾಚಾರ್ಯರ ತತ್ವಜ್ಞಾನಕ್ಕೆ ಶ್ರೀ ವಾದಿರಾಜರ ಕೊಡುಗೆ” ವಿಷಯವಾಗಿ ಧಾರ್ಮಿಕ ಪ್ರವಚನ.
ಮಾರ್ಚ್ 7, ಶನಿವಾರ : ಶ್ರೀ ವ್ಯಾಸರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಆತನೂರು ಭೀಮಸೇನಾಚಾರ್ಯರಿಂದ “ಶ್ರೀ ವ್ಯಾಸರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ವ್ಯಾಸತ್ರಯಗಳ ಪರಿಚಯ” ವಿಷಯವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
