ಒಳಮೀಸಲಾತಿ ಒಗ್ಗಟ್ಟು ಕಾಯ್ದುಕೊಳ್ಳಲು ಕೋಟೆ ಎಂ.ಶಿವಣ್ಣ ಮನವಿ
ತಾಂಡವಪುರ ಮಾರ್ಚ್ 23: ಮಾದಿಗ ಸಮುದಾಯ ಹಲವು ವರ್ಷಗಳಿಂದ ಒಳಮೀಸಲಾತಿಯನ್ನು ಕೇಳುತ್ತಾ ಬಂದಿದ್ದು, ಇದೀಗ ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ದಾಸ್ ಆಯೋಗದ ವರದಿ ಅನುಸಾರ ಹಂಚಿಕೆ ಮಾಡಿರುವ ಒಳಮೀಸಲಾತಿಯನ್ನು ಒಪ್ಪಿಕೊಂಡು ಸಹೋದರರಂತೆ ಸಹಬಾಳ್ವೆಯಿಂದ ಒಗ್ಗಟ್ಟು ಕಾಯ್ದುಕೊಳ್ಳಲು ಎರಡೂ ಪಂಗಡ ಮುಂದಾಗಬೇಕು ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಮಾಜಿ ಸಚಿವ ಕೋಟೆ ಎಮ್ ಶಿವಣ್ಣ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಳಮೀಸಲಾತಿ ಪ್ರಸ್ತಾಪ ಹಾಗೂ ಹೋರಾಟಕ್ಕೆ ೩೫ ವರ್ಷ ಕಳೆದಿದೆ. ಮಾದಿಗ ಹಾಗೂ ಸಂಬಂಧಿತ ಜಾತಿ ಜನರು ಒಳಮೀಸಲಾತಿ ಒದಗಿಸುವಂತೆ ಹೋರಾಟ ಮಾಡಿದ ಫಲವಾಗಿ ೨೦೦೪ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಒಳಮೀಸಲಾತಿ ಪ್ರಕ್ರಿಯೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಚಾಲನೆ ನೀಡಿದರು.
೨೦೦೫ರಲ್ಲಿ ನ್ಯಾ.ಸದಾಶಿವಾ ಆಯೋಗ ರಚಿಸಿದರು. ಆ ಆಯೋಗ ಮಾದಿಗ ಮತ್ತು ಸಂಬಂಧಿಸಿದ ಜಾತಿಗಳಿಗೆ ಶೇ.೬ರಷ್ಟು, ಹೊಲೆಯ ಮತ್ತು ಸಂಬಂಧಿಸಿದ ಜಾತಿಗಳಿಗೆ ಶೇ.೫ರಷ್ಟು ಹಾಗೂ ಬೋವಿ, ಕೊರಮ, ಕೊರಚ ಮತ್ತು ಇತರ ಜಾತಿಗಳಿಗೆ ಶೇ.೪ರಷ್ಟು ಮೀಸಲಾತಿ ಹಂಚಿಕೆ ಮಾಡಿ ವರದಿ ತಯಾರಿಸಿ ೨೦೧೨ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ವರದಿ ಸಲ್ಲಿಸಿತ್ತು. ಆದರೆ ರಾಜಕೀಯ ಒತ್ತಡಗಳಿಂದ ಆ ವರದಿಯನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.
ಒಳಮೀಸಲಾತಿ ವಿಚಾರದಲ್ಲಿ ಮಾದಿಗ, ಹೊಲೆಯ ಸಮುದಾಯಗಳ ವೈಮನಸ್ಸನ್ನು ಬಿಟ್ಟು, ಹಂಚಿಕೆಯಾಗಿರುವ ಒಳಮೀಸಲಾತಿಯನ್ನು ಸೌಹಾರ್ಧಯುತವಾಗಿ ಒಪ್ಪಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ಹಸಿದವರಿಗೆ ಆಧ್ಯತೆ ನೀಡುವಂತೆ ಹೇಳಿದ್ದಾರೆ.
ಈ ಮಾತಿನಂತೆ ಒಳಮೀಸಲಾತಿಯನ್ನು ಒಪ್ಪಿಕೊಂಡು, ಎರಡೂ ಸಮುದಾಯ ಹಂಚಿಕೊಂಡು ತಿನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಈಗಾಗಲೇ ದಲಿತ ಸಿಎಂ ವಿಚಾರ ಪ್ರಸ್ತಾಪವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಳಮೀಸಲಾಯಿತಿಯನ್ನು ಮುಂದಿಟ್ಟುಕೊAಡು ದಲಿತರಲ್ಲಿ ಒಗ್ಗಟ್ಟು ಇಲ್ಲದಂತೆ ಮಾಡಿಕೊಳ್ಳುವುದು ಸೂಕ್ತವಲ್ಲ. ಆ ಕಾರಣದಿಂದ ಎರಡೂ ಸಮುದಾಯದ ಮುಖಂಡರು ಒಳಮೀಸಲಾತಿಗೆ ಒಪ್ಪಿಗೆ ಸೂಚಿಸಿ ಎರಡೂ ಪಂಗಡವೂ ಒಂದಾಗಿ ಒಗ್ಗಟ್ಟು ಕಾಯ್ದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಶ್ರೀಧರ್, ಮುಖಂಡರಾದ ಪ್ರೊ. ವೆಂಕಟೇಶ್ ಕುಮಾರ್, ರಮೇಶ್, ರಂಗನಾಥ್ ಇದ್ದರು.