ವಿಜಯ ದರ್ಪಣ ನ್ಯೂಸ್….
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ಸ್ವಗ್ರಾಮದಲ್ಲಿ ಮೌನ ಮೈಸೂರು ಜಿಲ್ಲಾ ನೂತನ ಸಾರಥಿ ಸಿದ್ದು ನಡೆಯತ್ತ ಚಿತ್ತ

ತಾಂಡವಪರ: ಮೇ 28 ಮುಖ್ಯಮಂತ್ರಿಗಳನ್ನು ಕಳೆದಕೊಂಡ ಜಿಲ್ಲೆ ಎಂಬಂತಾಗಿರುವ ಮೈಸೂರಿನ ಮುಂದಿನ ಸಾರಥಿಯಾರು ಎಂಬ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅಥವಾ ತನ್ವೀರ್ ಸೇಠ್ಗೆ ಈ ಅವಕಾಶ ಸಿಗಲಿದೆಯೇ ಎಂಬ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಾಯಕತ್ವದಲ್ಲಿ ಮೈಸೂರಿನ ಬಹುತೇಕ ರಾಜಕೀಯ ತೀರ್ಮಾನ ಆಗುವುದು ಅವರಿಂದಲೇ ಆಗಿದೆ. ಹೀಗಿರುವಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಸ್ವತಃ ತಾವೇ ಮೈಸೂರಿನ ಇದುವರೆವಿಗಿನ ಅಭಿವೃದ್ಧಿ ಪರ ತೀರ್ಮಾನಗಳನ್ನು ಕೈಗೊಂಡಿದ್ದರು. ಅವರ ಮಾತೇ ಜಿಲ್ಲೆಗೆ ಸುಪ್ರೀಂ ಆಗಿತ್ತು. ಆದರೆ, ಈ ಸನ್ನಿವೇಶದಲ್ಲಿ ಮೈಸೂರು ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಮುನ್ನಡೆಸುವುದಕ್ಕೆ ಸಿದ್ದರಾಮಯ್ಯನವರೇ ಬರುತ್ತಾರಾ ಅಥವಾ ಬೇರೊಬ್ಬರಿಗೆ ಇದರ ಹೊಣೆ ಹೋಗುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಯತೀಂದ್ರಗೆ ಸ್ಥಾನ: ಇನ್ನೂ ಅಧಿಕಾರ ಹಂಚಿಕೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಹೀಗಿರುವಾಗ ಮೂಲಗಳ ಪ್ರಕಾರ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟದಲ್ಲಿ ಸ್ಥಾನದಲ್ಲಿ ಸಿಗಲಿದೆ ಎಂಬ ಮಾತು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಮೈಸೂರು ಉಸ್ತುವಾರಿಯೂ ಸೇರಿದಂತೆ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ಸಂಪುಟ ಸೇರುವ ಬಗ್ಗೆ ಇದುವರೆವಿಗೂ ಸಿದ್ದರಾಮಯ್ಯ ಮಾತ್ರ ಯಾವುದೇ ಚರ್ಚೆ ನಡೆಸಿಲ್ಲ. ಯತೀಂದ್ರರಿಗೆ ಅನುಭವದ ಕೊರತೆ ಇರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಂದಿನ ಬೆಳವಣಿಗೆಗಳನ್ನು ಕಾದು ನೋಡುವ ತಂತ್ರ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಡಿಕೆ ಆಪ್ತನಿಗೆ ಒಲಿಯುವುದೇ: ಪಕ್ಷದ ಹೈಕಮಾಂಡ್ ನಮಗೆ ಸುಪ್ರೀಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಪಕ್ಷಕ್ಕೆ ಅನಿವಾರ್ಯ ಎನ್ನುವ ಜಿಲ್ಲೆಯ ಹಿರಿಯ ಶಾಸಕರಲ್ಲಿ ಒಬ್ಬರಾದ ಶಾಸಕ ತನ್ವೀರ್ ಸೇಠ್ ಡಿಕೆಶಿ ತಂಡದ ಕೋಟಾದಡಿಯಲ್ಲಿ ಸಚಿವ ಸ್ಥಾನ ಬಯಸಿದ್ದಾರೆ. ಅಲ್ಲದೆ ಹಿರಿತನ ಆಧಾರದ ಮೇಲೂ ತಮಗೆ ಟಿಕೆಟ್ ನೀಡುವಂತೆ ತಮ್ಮದೇ ದಾಟಿಯಲ್ಲಿ ತನ್ವೀರ್ ಸೇಠ್ ಒತ್ತಡ ಹಾಕಲಾರಂಭಿಸಿದ್ದಾರೆ. ಈ ಬಗ್ಗೆಯೂ ಚಿಂತನೆ ನಡೆಸಿರುವ ಡಿ.ಕೆ.ಶಿವಕುಮಾರ್ ಸಹ ಇವರ ಪರವಾಗಿ ಬ್ಯಾಟಿಂಗ್ ಬೀಸುವ ತಂತ್ರಗಾರಿಕೆಯಿದೆ. ಆದರೆ, ತವರೂರಿನ ಸಾರಥಿ ನಿರ್ಧಾರದಲ್ಲಿ ಸಿದ್ದರಾಮಯ್ಯ ಅಂತಿಮ ಆಗಿರುವುದರಿಂದ ಯಾರಿಗೆ ಮೈಸೂರು ಜಿಲ್ಲಾ ಸಾರಥಿ ಭಾಗ್ಯ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮಹದೇವಪ್ಪ ಅನುಮಾನ
ಸಿದ್ದರಾಮಯ್ಯನವರ ಪರಮಾಪ್ತ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿರುವುದರಿಂದ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವುದರಿಂದ ಮೈಸೂರು ಉಸ್ತುವಾರಿ ಸ್ಥಾನ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಇನ್ನೂ ತಮ್ಮ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಸಿಎಂ ಸಿದ್ದರಾಮಯ್ಯರನ್ನೇ ಅವಲಂಬಿಸಿರುವ ಮಹದೇವಪ್ಪ ಸದ್ಯದ ಸ್ಥಿತಿಯಲ್ಲಿ ತಮ್ಮ ಉಳಿವು, ಅಳಿವು ಸಿದ್ದರಾಮಯ್ಯ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದಾರೆ.











