ವಿಜಯ ದರ್ಪಣ ನ್ಯೂಸ್…..
ರೈತರ ಫಲವತ್ತಾದ ಕೃಷಿ ಜಮೀನು ಬಲವಂತದಿಂದ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಬಿಡೊಲ್ಲ : ರವಿಕೃಷ್ಣಾರೆಡ್ಡಿ

ಶಿಡ್ಲಘಟ್ಟ : ಕೆಐಎಡಿಬಿ ಬಳಿ ದೊಡ್ಡ ಪ್ರಮಾಣದ ಲ್ಯಾಂಡ್ ಬ್ಯಾಂಕ್ ಇದ್ದು, ಅದನ್ನು ಬಳಸಿಕೊಳ್ಳದೆ ಫಲವತ್ತಾದ ಕೃಷಿ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ ಕೈಗಾರಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ವಿರೋಧವಿಲ್ಲ, ಆದರೆ ರೈತರ ಬದುಕಿಗೆ ಧಕ್ಕೆಯಾಗುವ ಅಭಿವೃದ್ಧಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು
ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ಎಸ್ ಪಕ್ಷ)ಯ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪ ಮಾಡಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯಿಂದ ರೈತರ ಫಲವತ್ತಾದ ಜಮೀನಿನ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ೧೫೬ ದಿನಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕೆಆರ್ಎಸ್ ಪಕ್ಷದಿಂದ ಕೆಐಎಡಿಬಿ ವ್ಯಾಪ್ತಿಯ ಹಳ್ಳಿಗಳಿಂದ ಡಿಸಿ ಕಚೇರಿ ವರೆಗೂ ಸೋಮವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚಿಂತಾಮಣಿ ತಾಲ್ಲೂಕು ಕೈವಾರ ಬಳಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶವನ್ನು ಮೊದಲು ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಅಲ್ಲಿನ ಖಾಲಿ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಜಂಗಮಕೋಟೆ ಭಾಗದ ಬಹುತೇಕ ರೈತರು ರೇಷ್ಮೆ ಕೃಷಿ, ಹೈನುಗಾರಿಕೆ ಹಾಗೂ ಕೃಷಿಯನ್ನೇ ಅವಲಂಬಿಸಿದ್ದಾರೆ, ರೈತರ ಜಮೀನುಗಳನ್ನೇ ಕಿತ್ತುಕೊಂಡು ೨೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರೇಷ್ಮೆ ಗೂಡು ಮಾರುಕಟ್ಟೆ ಪೂರ್ಣಗೊಂಡರೂ, ರೇಷ್ಮೆಗೂಡು ಉತ್ಪಾದಿಸುವ ರೈತರೇ ಇಲ್ಲದಂತಾದರೆ ಮಾರುಕಟ್ಟೆ ಸ್ಮಶಾನವಾಗುತ್ತದೆ ಎಂದು ರವಿಕೃಷ್ಣಾರೆಡ್ಡಿ ಎಚ್ಚರಿಸಿದರು.
ಕಡಿಮೆ ನೀರಿನಲ್ಲಿಯೇ ಉತ್ತಮ ಕೃಷಿ ಮಾಡುತ್ತಿರುವ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ರೈತರ ಕೃಷಿ ಭೂಮಿಯನ್ನು ಉಳಿಸಬೇಕು. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿಪಡಿಸುವ ಬದಲು ಹೊಸ ಕೃಷಿ ಭೂಮಿಯನ್ನು ಪಡೆಯುವುದು ಸರಿಯಲ್ಲ ಎಂದು ಹೇಳಿದರು.
ರೈತರ ಫಲವತ್ತಾದ ಕೃಷಿ ಜಮೀನುಗಳ ಭೂಸ್ವಾಧೀನಕ್ಕೆ ಮುಂದಾದ ಕಾರಣ ರೈತರು ಹಾಕಿದ ಶಾಪದಿಂದಾಗಿಯೆ ಮಾಜಿ ಸಚಿವರು ಹಾಗು ಶಾಸಕ ಎಂ.ಸಿ.ಸುಧಾಕರ್ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗಲಿಲ್ಲ ಛೇಡಿಸಿದರು.
ರೈತ ತನ್ನ ಜಮೀನನ್ನು ಸ್ವಯಂಪ್ರೇರಣೆಯಿಂದ ಮಾರಲು ಬಯಸಿದರೆ ವಿರೋಧವಿಲ್ಲ ಆದರೆ ಒತ್ತಡ ಅಥವಾ ದಬ್ಬಾಳಿಕೆ ಮೂಲಕ ಭೂಸ್ವಾಧೀನ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಪರಿಹಾರದ ಹಣ ಸಿಕ್ಕರೂ ಕಳೆದುಕೊಂಡ ಜಮೀನು ಮರಳಿ ಬರುವುದಿಲ್ಲ ಎಂದರು.

ಜಂಗಮಕೋಟೆ ಸೇರಿದಂತೆ ಸರ್ಜಾಪುರ, ಬೈರಮಂಗಲ ಹಾಗೂ ದೊಡ್ಡಬಳ್ಳಾಪುರ ಭಾಗಗಳಲ್ಲೂ ಕೃಷಿ ಭೂಮಿ ಸ್ವಾಧೀನದ ಆತಂಕವಿದೆ ,೧೫೬ ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಸರಕಾರ ಸ್ಪಂದಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ವೇಳೆ ಬೈಕ್ ಜಾಥಾವನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ರಾಜಣ್ಣ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮತ್ತಿತರರು ಮಾತನಾಡಿದರು.
ಕೆಐಎಡಿಬಿಯು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಜಂಗಮಕೋಟೆಯಿಂದ ಆರಂಭವಾದ ಬೈಕ್ ರ್ಯಾಲಿಯು ಯಣ್ಣಂಗೂರು, ನಡಿಪಿನಾಯಕನಹಳ್ಳಿ, ಬಸವಾಪಟ್ಟಣ, ತಾದೂರು ಮೂಲಕ ಸಾಗಿತು, ಆನಂತರ ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ಧಾಣದ ಮೂಲಕ ಅನಿರ್ಧಿಷ್ಟ ಧರಣಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರತಿಭಟನಾ ವೇದಿಕೆಗೆ ತೆರಳಿತು.
ಮಾರ್ಗ ಮದ್ಯೆ ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಬೈಕ್ ರ್ಯಾಲಿ ನಿಲ್ಲಿಸಿ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾದ ರೈತ ವಿರೋಧಿ ಸರಕಾರದ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.
ಕೆಲ ಕಾಲ ರಸ್ತೆ ತಡೆಯಾದ್ದರಿಂದ ಚಿಕ್ಕಬಳ್ಳಾಪುರ
-ಚಿಂತಾಮಣಿ ಮಾರ್ಗದಲ್ಲಿ ಕಿಲೋ ಮೀಟರ್ಗಟ್ಟಲೆ ವಾಹನಗಳು ನಿಂತು ಸವಾರರು ಪರದಾಡುವಂತಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಈರೇಬಲ್ಲ ಕೃಷ್ಣಪ್ಪ, ಹಿತ್ತಲಹಳ್ಳಿ ರಮೇಶ್, ಅಜಿತ್ ಹಾಗು ಪದಾಧಿಕಾರಿಗಳು
ಸೇರಿದಂತೆ ಸುಮಾರು ೨ ಸಾವಿರಕ್ಕೂ ಹೆಚ್ಚು ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು, ಕೆಆರ್ಎಸ್ ಪಕ್ಷದ ಸೇನಾನಿಗಳು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.










