10 ಕೋಟಿಗೆ ತಲೆಮಾರಿಕೊಂಡು ಹೋದವನು ಬಾಲಕೃಷ್ಣ, ಅವನಂತೆ ಹಲ್ಕಾ ರಾಜಕಾರಣ ಯಾರೂ ಮಾಡಲ್ಲ: ಮಾಜಿ ಶಾಸಕ ಎ. ಮಂಜುನಾಥ್

ರಾಮನಗರ: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪತ್ನಿಯ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ತಾಕತ್ತಿದ್ದರೆ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಲಿ ಎಂದು ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಕುಮಾರಸ್ವಾಮಿ ಅವರು ಯಾವತ್ತೂ ಅಂತಹ ಕೆಲಸ ಮಾಡಿದವರಲ್ಲ. ತಮ್ಮ ಸಹಿ ಮಾರಿಕೊಂಡವರಲ್ಲ. ನಮ್ಮ ನಾಯಕನ ವಿರುದ್ಧ ವೈಯಕ್ತಿಕ ದಾಳಿ ಮಾಡಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಆದ ಗತಿಯೇ ಬಾಲಕೃಷ್ಣ ಅವರಿಗೂ ಆಗಲಿದೆ. ಕಾರ್ಯಕರ್ತರು ಸಿಕ್ಕ ಸಿಕ್ಕ ಕಡೆ ಅಡ್ಡ ಹಾಕಿಕೊಂಡು ಪ್ರಶ್ನಿಸುತ್ತಾರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಬಾಲಕೃಷ್ಣ ಅವರು ಜೆಡಿಎಸ್ ರಾಷ್ಟ್ರೀಯ ನಾಯಕರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬವನ್ನು ಬೈದುಕೊಂಡು ಸಚಿವರಾಗಿದವರು. ಅವರ ಕುಟುಂಬವನ್ನು ಬೈದುಕೊಂಡು ಓಡಾಡಿದರೆ ಹೆಚ್ಚಿನ ಗೌರವ ಸಿಗುತ್ತದೆ ಅಂದುಕೊಂಡಿದ್ದಾರೆ.
ಕುಮಾರಸ್ವಾಮಿ ಕುಟುಂಬ ದೂಷಿಸಿದರೆ ಬಾಲಕೃಷ್ಣ ಅವರಿಗೆ ಯಾವುದೇ ಕಿರೀಟ ಸಿಗುವುದಿಲ್ಲ. ಅವರ ಮನೆಯಲ್ಲಿ ಉಂಡು ಅಧಿಕಾರ ಅನುಭವಿಸಿ, ಈಗ ಯಾರನ್ನೋ ಒಲೈಕೆ ಮಾಡಲು ಅವರ ಕುಟುಂಬದ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರ ಸುಳ್ಳು ಮತ್ತು ಪೊಳ್ಳು ಹೇಳಿಕೆಗಳಿಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಎಚ್.ಸಿ. ಬಾಲಕೃಷ್ಣ ಅವರು ₹10 ಕೋಟಿಗೆ ತನ್ನ ತಲೆ ಮಾರಿಕೊಂಡು ಕಾಂಗ್ರೆಸ್ಗೆ ಹೋಗಿ ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದವರು. ಅವರಂತಹ ಹೀನ ರಾಜಕಾರಣ ಯಾರೂ ಮಾಡುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.










