ವಿಜಯ ದರ್ಪಣ ನ್ಯೂಸ್…..
ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಅರ್ಥಪೂರ್ಣ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಭಕ್ತಿಭಾವದಿಂದ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀ ಕೃಷ್ಣನ ಜೀವನ ಸಂದೇಶಗಳು, ಧರ್ಮ ಹಾಗೂ ಸತ್ಯದ ಮಹತ್ವ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಅಗತ್ಯದ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿ ಗಂಗಯ್ಯ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಶ್ರೀ ಕೃಷ್ಣನ ಜೀವನಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ದಿನವಾಗಿದೆ. ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ನೀಡಿರುವ ಕರ್ತವ್ಯ, ಸತ್ಯ, ಧರ್ಮ ಹಾಗೂ ನಿಸ್ವಾರ್ಥ ಸೇವೆಯ ಸಂದೇಶಗಳು ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ. ಯುವಜನತೆ ಹಾಗೂ ಮಕ್ಕಳಿಗೆ ಶ್ರೀ ಕೃಷ್ಣನ ಆದರ್ಶಗಳನ್ನು ಪರಿಚಯಿಸುವ ಮೂಲಕ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ತಾವರೆಕೆರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಗಂಗಾಪುರ ಮಂಜುನಾಥ್ ಮಾತನಾಡಿ, ಶ್ರೀ ಕೃಷ್ಣನ ಬಾಲ್ಯ ಜೀವನದಿಂದ ಹಿಡಿದು ಮಹಾಭಾರತದ ಸಂದರ್ಭದಲ್ಲಿ ನೀಡಿದ ಗೀತೋಪದೇಶದವರೆಗೆ ಅವರ ಬದುಕು ಸಮಾಜಕ್ಕೆ ಹಲವು ಮೌಲ್ಯಯುತ ಸಂದೇಶಗಳನ್ನು ನೀಡುತ್ತದೆ. ಕೃಷ್ಣನ ಆದರ್ಶಗಳನ್ನು ಕೇವಲ ಹಬ್ಬದ ದಿನಕ್ಕೆ ಸೀಮಿತಗೊಳಿಸದೆ, ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವುದರಿಂದ ಪರಸ್ಪರ ಬಾಂಧವ್ಯ ಹಾಗೂ ಸೌಹಾರ್ದತೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಉಪಾಧ್ಯಕ್ಷ ಸುಧಾಕರ್, ಮಾಜಿ ಅಧ್ಯಕ್ಷರಾದ ರಮೇಶ್ ,ಪವಿತ್ರ ಮಂಜುನಾಥ್, ಪ್ರಿಯಾಂಕಾ ರಮೇಶ್, ಸದಸ್ಯರಾದ ನಾಗೇಶ್, ಕರ ವಸೂಲಿಗಾರ ರಾಜಣ್ಣ, ಮೀನಾಕ್ಷಿ, ಬಚ್ಚೇಗೌಡ, ಮಂಜುನಾಥ್ ಹಾಗೂ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.










