ವಿಜಯ ದರ್ಪಣ ನ್ಯೂಸ್….
ಸ್ಥಳೀಯವಾಗಿ ಕಲಾವಿದರನ್ನು ಗುರ್ತಿಸಿ, ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯ ಉಳಿಸಿ:ಮಂಡಿಬೆಲೆ ರಾಜಣ್ಣ

ವಿಜಯಪುರ: ಸ್ಥಳೀಯವಾಗಿ ಕಲಾವಿದರನ್ನು ಗುರ್ತಿಸಿ, ಅವರನ್ನು ಪ್ರೋತ್ಸಾಹಗೊಳಿಸುವ ಮೂಲಕ, ಕಲೆ, ಸಾಹಿತ್ಯ ಕ್ಷೇತ್ರವನ್ನು ಗ್ರಾಮೀಣ ಭಾಗದಲ್ಲಿ ಜೀವಂತವಾಗಿಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಹೇಳಿದರು.
ಪಟ್ಟಣದಲ್ಲಿ, ಸ್ಥಳೀಯ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಯಲಿಯೂರು ಪಿಳ್ಳೇಗೌಡ ಅವರು, ನಿರ್ಮಾಣ ಮಾಡಿರುವ ‘ನೀಲಿ’ ಕನ್ನಡ ಚಲನಚಿತ್ರ ಬಿಡುಗಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತಿಚೆಗೆ ಚಲನಚಿತ್ರಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿರುವ ಕಾರಣ, ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯದ ಪರಿಚಯವೇ ಇಲ್ಲದಂತಾಗುತ್ತದೆ. ಸ್ಥಳೀಯ ಕಲಾವಿದರು ನಿರ್ಮಿಸಿರುವ ಚಲನಚಿತ್ರಗಳನ್ನು ವೀಕ್ಷಣೆ ಮಾಡುವ ಮೂಲಕ ಪ್ರೋತ್ಸಾಹ ಮಾಡಿದರೆ, ಅವರು ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತಾರೆ ಎಂದರು.
ನೀಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಪಿಳ್ಳೇಗೌಡ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ, ಸಿನಿಮಾ ಮಾಡುವುದು ತುಂಬಾ ಕಷ್ಟಕರವಾದ ಪರಿಸ್ಥಿತಿಯಾಗಿದ್ದು, ಅದರಲ್ಲೂ ಕನ್ನಡ ಸಿನಿಮಾಗಳನ್ನು ವೀಕ್ಷಣೆ ಮಾಡುವಂತಹವರು ತೀರಾ ಕಡಿಮೆಯಾಗಿದ್ದಾರೆ. ಇದರ ಪರಿಣಾಮ, ಸಾಕಷ್ಟು ಮಂದಿ ಯುವಕಲಾವಿದರು, ಕೌಶಲ್ಯಗಳಿದ್ದರೂ, ಎಲೆ ಮರೆಕಾಯಿಯಂತೆ ಮರೆಯಾಗುತ್ತಿದ್ದು, ಅವರನ್ನು ಯುವಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕಲಾವಿದರಾದ ಅಂಕತಟ್ಟಿ ವೆಂಕಟೇಶ್, ನೀಲಿ ಚಲನಚಿತ್ರ ನಟರಾದ ಶ್ರೀಧರ್ ಶೆಟ್ಟಿ, ಮೈಕಲ್ ಶಿವು, ಮೋಹನ್ ಬಾಬು, ಬಿ.ರಾಮಾಂಜಿನಪ್ಪ, ಶರಣಯ್ಯ ಹಿರೇಮಠ್, ಚಲನಚಿತ್ರ ನಿರ್ದೇಶಕ ಯಲಿಯೂರು ಪಿಳ್ಳೆಗೌಡಒ ಸೇರಿದಂತೆ ಕಲಾವಿದರು ಹಾಜರಿದ್ದರು.