ವಿಜಯ ದರ್ಪಣ ನ್ಯೂಸ್…..
ಹೆಜ್ಜೆಗೆ ಗ್ರಾಮದ ಬಳಿ ಕಪಿಲ ನದಿ ದಡದಲ್ಲಿ 46 ಮರಗಳ ಹನನ ಖಂಡಿಸಿ ಬೃಹತ್ ಪ್ರತಿಭಟನೆ

ತಾಂಡವಪುರ ಮಾರ್ಚ್ 23: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ ದಂಡೆಯ ಮೇಲೆ 46 ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದಿರುವ ಘಟನೆ ವಿರುದ್ಧ ವಿವಿಧ ಸಂಘಟನೆಗಳಿಂದ ಅರಣ್ಯ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಘಟನೆ ನಡೆದು ಎರಡು ವಾರಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿಲ್ಲ. ಮರಗಳನ್ನು ಅಕ್ರಮವಾಗಿ ಕಡಿಯಲು ಕಾರಣರಾದವರನ್ನು ಇನ್ನೂ ಪತ್ತೆ ಹಚ್ಚಿಲ್ಲ. ಇಷ್ಟು ಗಂಭೀರವಾದ ಘಟನೆಯನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹಗುರವಾಗಿ ತೆಗೆದುಕೊಂಡಿದೆ.
ಹಾಡುಹಗಲೇ ರಾಜಾರೋಷವಾಗಿ ಸರ್ಕಾರಿ ಜಾಗದಲ್ಲಿ 46 ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದಿರುವುದು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿಷ್ಕ್ರಿಯತೆನ್ನು ತೋರಿಸುತ್ತದೆ ಎಂದರು.
ಈ ಘಟನೆ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಿ ಮರಗಳನ್ನು ಕಡಿದರವರಿಗೆ, ಕಡಿಯಲು ಕಾರಣರಾದವರಿಗೆ ಮತ್ತು ಇವರ ಜೊತೆಗೆ ಶಾಮೀಲಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು.
ಈ ಘಟನೆ ನಡೆದಿರುವುದು ಮುಖ್ಯ ಮಂತ್ರಿ ತವರು ಜಿಲ್ಲೆಯಲ್ಲಿ ಅಷ್ಟೇ ಅಲ್ಲ. ಅವರೇ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೀಗಾಗಿ ಮುಖ್ಯ ಮಂತ್ರಿಗಳೇ ಖುದ್ದು ಆಸಕ್ತಿವಹಿಸಿ ಈ ಅಕ್ರಮ ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮಗಳನ್ನು ವಹಿಸುವ ಮೂಲಕ ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಲೀಲಾ, ಭಾಗ್ಯ, ಅಂಜನಾ, ಸುಗುಣ, ಪ್ರಭಾ, ಗಂಟಯ್ಯ , ಬಾನು ಪ್ರಶಾಂತ್, ಶೈಲಜೇಶ್, ಗುರುಸ್ವಾಮಿ, ಸವಿತಾ, ಸ್ಮಿತಾ, ಅಕ್ಬರ್, ಬಂಗಾರ ನಾಯಕ, ವಿಶ್ವನಾಥ್, ಸುಧೀರ್, ಶಿವಶಂಕರ್, ಸುಮಲತಾ, ಶ್ಯಾಮಲಾ ಮುಂತಾದವರು ಮತ್ತು ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಮರಂಕಯ್ಯ ಮುಂತಾದವರು ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಮತ್ತು ಉಪಾಧ್ಯಕ್ಷ ಸೋಮಸುಂದರ್, ಮೈಸೂರು ಗ್ರಾಹಕರ ಪರಿಷತ್ತಿನ ಶೋಭನಾ, ಟೀಮ್ ಮೈಸೂರಿನ ಗೋಕುಲ ಇತರರಯ ಭಾಗವಹಿಸಿದ್ದರು.










