ವಿಜಯ ದರ್ಪಣ ನ್ಯೂಸ್……
ಗ್ಯಾಸ್ ಬುಕ್ ಮಾಡಿದ್ರೂ ಸಿಲಿಂಡರ್ ಸಿಗದೇ ಇರೋದಕ್ಕೆ ಗ್ರಾಹಕರ ಆಕ್ರೋಶ

ಶಿಡ್ಲಘಟ್ಟ : ಗ್ರಾಹಕರು ಗ್ಯಾಸ್ ಬುಕ್ ಮಾಡಿ ವಾರ, ಹತ್ತು ದಿನಗಳಾಗಿದೆ ಆದರೂ ಸಿಲಿಂಡರ್ ಸಿಗುತ್ತಿಲ್ಲ ,ಸಿಲಿಂಡರ್ ಸಿಗದಿದ್ದರೆ ನಾವು ಮಾಡೋದಾದರೂ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದಲ್ಲಿರುವ ವೆಂಕಟೇಶ್ವರ ಗ್ಯಾಸ್ ಏಜೆನ್ಸಿ ಬಳಿ ಬೆಳಗ್ಗೆಯೆ ನೂರಾರು ಮಂದಿ ಗ್ಯಾಸ್ ಬುಕ್ ಹಿಡಿದು ಸಿಲಿಂಡರ್ಗಾಗಿ ಕಾದರಾದರೂ ಸಾಕಷ್ಟು ಮಂದಿಗೆ ಸಿಲಿಂಡರ್ ಸಿಗಲಿಲ್ಲ,
ಸಿಲಿಂಡರ್ಗಾಗಿ ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಕಾದರೂ ಸಿಲಿಂಡರ್ ಸಿಗದೆ ವಾಪಸ್ಸಾಗಬೇಕಾಯಿತು. ಸಮರ್ಪಕ ಉತ್ತರ ಸಿಗದೆ ಗ್ರಾಹಕರು ಪರದಾಡುವಂತಾಯಿತು. ಸಿಲಿಂಡರ್ ಸಿಗುತ್ತೋ ಇಲ್ಲವೋ, ಸಿಗುವುದಾದರೆ ಯಾವತ್ತು ಸಿಗುತ್ತೆ ಎಂದು ಸ್ಪಷ್ಟವಾಗಿ ಹೇಳುವವರು ಯಾರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
4-5 ದಿನಗಳಿಂದಲೂ ಬಂದು ಸಿಲಿಂಡರ್ ಸಿಗದೆ ಬರಿಗೈಲಿ ವಾಪಸ್ ಹೋಗುತ್ತಿದ್ದೇವೆ. ನಾಳೆ ಸಿಗುತ್ತೆ ಎಂದು ಹೇಳುತ್ತಿದ್ದಾರೆ ಹೊರತು ಸಿಲಿಂಡರ್ ಮಾತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಿಲಿಂಡರ್ಗಾಗಿ ಗ್ರಾಹಕರು ಸೇರಿದ್ದ ಕಾರಣ ಗೋದಾಮಿನಿಂದ ಶಿಡ್ಲಘಟ್ಟ- ದಿಬ್ಬರಹಳ್ಳಿ ಮಾರ್ಗದ ಮುಖ್ಯರಸ್ತೆಯಲ್ಲೂ ಕ್ಯೂ ಇತ್ತು. ಹೆಚ್ಚಿನ ಜನರು ಸೇರಿದ್ದ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಜನ ಸಂದಣಿ ನಿಯಂತ್ರಿಸಿದರು.
ಗೋದಾಮು ನಿರ್ವಾಹಕರು ನೆರೆದಿದ್ದ ಗ್ರಾಹಕರಲ್ಲಿ ಮನವಿ ಮಾಡಿ, ಯಾರು ಗೊಂದಲ ಮಾಡಬೇಡಿ, ಸಿಲಿಂಡರ್ ಬುಕ್ ಮಾಡಿದ ಎಲ್ಲರಿಗೂ ಹಂತ ಹಂತವಾಗಿ ಸಿಲಿಂಡರ್ ವಿತರಿಸುತ್ತೇವೆ ಎಂದರು. ನಮಗೀಗ ಪ್ರತಿ ದಿನ ಸುಮಾರು 500 ಸಿಲಿಂಡರ್ ಪೂರೈಕೆಯಾಗುತ್ತದೆ. ಆದರೆ ಇದೀಗ ಒಂದು ದಿನಕ್ಕೆ 2-3 ಸಾವಿರ ಮಂದಿ ಬುಕ್ ಮಾಡುತ್ತಾರೆ. ಹಾಗಾಗಿ ಒಂದೇ ದಿನ ಎಲ್ಲರಿಗೂ ಸಿಲಿಂಡರ್ ಪೂರೈಕೆ ಮಾಡುವುದು ಕಷ್ಟ ,ಆದರೆ ಬುಕ್ ಮಾಡಿದ ಎಲ್ಲರ ಮನೆಗಳಿಗೂ ನಾವೇ ಸಿಲಿಂಡರ್ ಕಳುಹಿಸಿಕೊಡುತ್ತೇವೆ , ದಯಮಾಡಿ ಹೋಗಿ ಎಂದು ಗ್ಯಾಸ್ ಏಜೆನ್ಸಿ ಮಾಲೀಕ ವಿಶ್ವಾಸ್ ಮನವಿ ಮಾಡಿದರು.
ಆದರೆ ಗ್ರಾಹಕರು ಅಲ್ಲಿಂದ ಕದಲಲು ತಯಾರಿರಲಿಲ್ಲ ,ನಾವೇನು ಗಲಾಟೆ ಮಾಡುತ್ತಿಲ್ಲ ಗೊಂದಲ ಮೂಡಿಸುತ್ತಿಲ್ಲ, ನಮ್ಮ ಪಾಡಿಗೆ ನಾವು ಕ್ಯೂನಲ್ಲಿ ನಿಂತಿದ್ದೇವೆ, ನೀವು ಸಿಲಿಂಡರ್ ಕೊಟ್ಟರೆ ನಾವು ಹೋಗುತ್ತೇವೆ ಎಂದು ಪಟ್ಟು ಹಿಡಿದು ಅಲ್ಲಿಂದ ಯಾರೂ ಹೋಗಲಿಲ್ಲ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೆದಾರ್ ಪ್ರಕಾಶ್, ನಿರೀಕ್ಷಕಿ ವೆಂಕಟಲಕ್ಷ್ಮಮ್ಮ,ಹೇಮಂತ್ ಇನ್ನಿತರರು ಸ್ಥಳದಲ್ಲಿ ಹಾಜರಿದ್ದು ಗ್ರಾಹಕರ ಮನವೊಲಿಸಿ ಗ್ರಾಹಕರ ಮನವೊಲಿಸಿದ ನಂತರ ಮನೆ ,ಮನೆಗೆ ತಲುಪಿಸಲು ಗ್ಯಾಸ್ ಏಜೆನ್ಸಿ ಅವರಿಗೆ ತಿಳಿಸಿ ಪರಿಸ್ಥಿತಿ ನಿಭಾಯಿಸಿದರು.











