ವಿಜಯ ದರ್ಪಣ ನ್ಯೂಸ್….
ಶ್ರೀರಾಮನವಮಿ ಮಹೋತ್ಸವಕ್ಕೆ ರಾಜಾಜಿನಗರದಲ್ಲಿ ಭವ್ಯ ಚಾಲನೆ :70ನೇ ಶ್ರೀರಾಮೋತ್ಸವಕ್ಕೆ ಅದ್ದೂರಿ ಆರಂಭ

11 ದಿನಗಳ ವೈಭವೋತ್ಸವ – ಬ್ರಹ್ಮರಥೋತ್ಸವ, ಸೀತಾರಾಮ ಕಲ್ಯಾಣ, ಪಟ್ಟಾಭಿಷೇಕ ಸೇರಿದಂತೆ ವಿಶೇಷ ಕಾರ್ಯಕ್ರಮಗಳು
ರಾಜಾಜಿನಗರ: ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ 70ನೇ ವರ್ಷದ ಶ್ರೀರಾಮೋತ್ಸವವು ಮಾರ್ಚ್ 26ರಿಂದ 11 ದಿನಗಳ ಕಾಲ ಅದ್ದೂರಿಯಾಗಿ ಆರಂಭಗೊಂಡಿದೆ.
ಆಗಮ ಶಾಸ್ತ್ರಾನುಸಾರ ಪಂಡಿತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್. ಶ್ರೀಧರ್ ಅವರು ಶ್ರೀರಾಮೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ಅತಿ ದೊಡ್ಡ ಶ್ರೀರಾಮಾಂಜನೇಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಪ್ರಸಿದ್ಧಿ ಪಡೆದಿರುವ ಈ ದೇವಸ್ಥಾನದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೈಭವದಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು. ಬ್ರಹ್ಮರಥೋತ್ಸವ ಹಾಗೂ ಸುವರ್ಣ ವಜ್ರಾಂಗಿ ಅಲಂಕಾರ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.
ಕಾರ್ಯಕ್ರಮಗಳ ವಿವರ ಹೀಗಿದೆ: ಮಾರ್ಚ್ 28ರಂದು ಶೇಷವಾಹನೋತ್ಸವ, 29ರಂದು ಶ್ರೀರಾಮತಾರಕ ಹೋಮ ಮತ್ತು ಗರುಡವಾಹನೋತ್ಸವ, 30ರಂದು ಶ್ರೀ ಸೀತಾರಾಮ ಕಲ್ಯಾಣ, 31ರಂದು ಮುಕ್ತಾಲಂಕಾರ ಸೇವೆ ಹಾಗೂ ಆಶ್ವವಾಹನೋತ್ಸವ ನಡೆಯಲಿದೆ.
ಏಪ್ರಿಲ್ 1ರಂದು ನವನೀತ ಬೆಣ್ಣೆ ಅಲಂಕಾರ, 2ರಂದು ಪೌರ್ಣಿಮೆಯ ಪ್ರಯುಕ್ತ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ವಸ್ತ್ರಾಲಂಕಾರ, 3ರಂದು ಧನಲಕ್ಷ್ಮೀ ಅಲಂಕಾರ, 4ರಂದು ಜನವಾಹನೋತ್ಸವ ಹಾಗೂ ವಸ್ತ್ರಾಭರಣಾಲಂಕಾರ, 5ರಂದು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, 6ರಂದು ಹನುಮಂತೋತ್ಸವ, ವಸಂತೋತ್ಸವ ಮತ್ತು ಶಯನೋತ್ಸವ ಅಲಂಕಾರಗಳು ನಡೆಯಲಿವೆ.

ಶ್ರೀರಾಮನವಮಿ ಪ್ರಯುಕ್ತ 11 ದಿನಗಳ ಕಾಲ ರಾಮಾಯಣ ಗೊಂಬೆಯಾಟ, ಭರತನಾಟ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀರಾಮ ಸೇವಾ ಮಂಡಳಿಯ ಪದಾಧಿಕಾರಿಗಳಾದ ಕೆ.ಆರ್. ವಿಜಯರಾಘವನ್, ಎಸ್. ಮಹೇಶ್, ಜಯರಾಮ್, ಡಾ. ಮಂಜುನಾಥಸ್ವಾಮಿ, ವೆಂಕಟೇಶ್ ಬಾಬು, ಭರತ್, ಸುದರ್ಶನ್, ಗೀತಾ ರಮೇಶ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.









