ವಿಜಯ ದರ್ಪಣ ನ್ಯೂಸ್……
ದೇಶದ ಮಹಿಳೆಯರ ರಾಜಕೀಯ ಅಧಿಕಾರದ ಹಕ್ಕನ್ನು ಕಾಂಗ್ರೆಸ್ ಪಕ್ಷದ ನಾಯಕರು ಕಸಿದಿದ್ದಾರೆ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ

ತುಮಕೂರು, ಏ. 19- ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸಿ, ದೇಶದ ಮಹಿಳೆಯರ ರಾಜಕೀಯ ಅಧಿಕಾರದ ಹಕ್ಕನ್ನು ಕಾಂಗ್ರೆಸ್ ಪಕ್ಷದ ನಾಯಕರು ಕಸಿದಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಆರೋಪಿಸಿ, ಮುಂಬರುವ ಚುನಾವಣೆಗಳಲ್ಲಿ ದೇಶದ 70 ಕೋಟಿ ಮಹಿಳೆಯರು ತಕ್ಕ ಉತ್ತರ ನೀಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹು ಆಕಾಂಕ್ಷಿತ ಲೋಕಸಭೆ ಹಾಗೂ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಜಾರಿಗೆ ತರಬೇಕೆಂಬ ಮಸೂದೆ, ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ತಿರಸ್ಕರಿಸಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಗರದ ಬಿಜಿಎಸ್ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಾದೇವಿ ಮಾತನಾಡಿ, ಮಹಿಳೆಯರಿಗೆ ಸಿಗಬಹುದಾಗಿದ್ದ ರಾಜಕೀಯ ಅಧಿಕಾರದ ಅವಕಾಶವನ್ನು ತಿರಸ್ಕರಿಸಿದ ಕಾಂಗ್ರೆಸ್ ಪಕ್ಷವನ್ನು ಮಹಿಳೆಯರು ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸಿ ತಕ್ಕ ಪಾಠ ಕಲಿಸುತ್ತಾರೆ. ಲೋಕಸಭೆಯಲ್ಲಿ ಮಹಿಳಾ
ಮೀಸಲಾತಿ ಮಸೂದೆ ಫೇಲ್ ಆದಾಗ ಪ್ರಿಯಾಂಕ ಗಾಂಧಿ ವಿಕೃತವಾಗಿ ನಕ್ಕಿದ್ದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ. ಒಬ್ಬ ಮಹಿಳೆಯಾಗಿ ಮಹಿಳೆಯರು ರಾಜಕೀಯ ಅಧಿಕಾರ ಕಳೆದುಕೊಂಡ ಸಂದರ್ಭವನ್ನು ಸಂಭ್ರಮಿಸುವುದು ಮಹಿಳೆಯರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಇರುವ ಭಾವನೆ ತೋರಿಸುತ್ತದೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜ್ಯೋತಿ ತಿಪ್ಪೇಸ್ವಾಮಿ, ನಗರ ಅಧ್ಯಕ್ಷೆ ವಸಂತ ಸುದರ್ಶನ್, ಉಪಾಧ್ಯಕ್ಷೆ ರೇಖಾ ಶಿವಕುಮಾರ್, ಪ್ರೇಮಾ ಹೆಗಡೆ ಮೊದಲಾದವರು ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಬಿದ್ದು ಹೋಗಲು ಕಾರಣರಾದ ಕಾಂಗ್ರೆಸ್ ನಾಯಕರ ವಿರುದ್ಧ ದೇಶದ ಮಹಿಳೆಯರು ಮುಂದಿನ ಚುನಾವಣೆಗಳಲ್ಲಿ ಖಂಡಿತಾ ಸೇಡು ತೀರಿಸಿಕೊಳ್ಳುತ್ತಾರೆ. ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡದೆ, ಕೇವಲ ವೋಟ್ ಬ್ಯಾಂಕ್ ರೀತಿಯ ಭಾವನೆ ಹೊಂದಿರುವ ಕಾಂಗ್ರೆಸ್ ನಾಯಕರ ನಿಜ ಬಣ್ಣ ಬಯಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅಧಿಕಾರ ನೀಡುವುದು ಕಾಂಗ್ರೆಸ್ ನಾಯಕರಿಗೆ ಇಷ್ಟವಿಲ್ಲ. ಕಾಂಗ್ರೆಸ್ ಪಕ್ಷದ ಮಹಿಳೆಯರೇ ತಮ್ಮ ಪಕ್ಷದ ನಾಯಕರ ವಿರುದ್ಧ ಸಿಡಿದೇಳುವ ಕಾಲ ಬರುತ್ತದೆ ಎಂದರು.
ಕೇವಲ 2 ಸಾವಿರ ರೂ. ಕೊಟ್ಟು ಮಹಿಳೆಯರ ವೋಟು ಪಡೆಯಬಹುದು ಎಂಬ ಕಾಲ ಬದಲಾಗಿದೆ. ಮಹಿಳೆಯರು ಜಾಗೃತರಾಗಿದ್ದಾರೆ. ದೇಶದಲ್ಲಿ ಅರ್ಧದಷ್ಟು ಸಂಖ್ಯೆಯಲ್ಲಿರುವ ಹೆಣ್ಣುಮಕ್ಕಳು ತಮ್ಮ ಅಧಿಕಾರ ಕಸಿದ ಕಾಂಗ್ರೆಸ್ ವಿರುದ್ಧ ದೇಶವ್ಯಾಪಿ ಕ್ರಾಂತಿ ಮಾಡಬೇಕು. ಮಹಿಳಾ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ನಾಯಕರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಬಿ.ಸುರೇಶ್ಗೌಡ ಮಾತನಾಡಿ,
ಮಹಿಳಾ ಮೀಸಲಾತಿ ಮಸೂದೆಯನ್ನು ವಿರಸ್ಕರಿಸಿದ ಕಾಂಗ್ರೆಸ್ ಮುಖಂಡರು ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಅವರನ್ನು ಅಧಿಕಾರವಂಚಿತರನ್ನಾಗಿ ಮಾಡುವ ಸಂಚು ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಯಾವತ್ತು ಜ್ಞಾನೋದಯವಾಗುವುದೋ ಗೊತ್ತಿಲ್ಲ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಕೇವಲ 3 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಅರಬ್ಬಿ ಸಮುದ್ರಕ್ಕೆ ಎತ್ತಿ ಎಸೆಯುತ್ತಾರೆ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡು ಯಶಸ್ವಿಯಾಗಿ ನಿಭಾಯಿಸುತ್ತಿರುವ ಮಹಿಳೆಯರಿಗೆ ದೇಶ ಆಳುವ ಅರ್ಹತೆ, ಸಾಮರ್ಥವಿದೆ ಎಂಬುದು ಪ್ರಧಾನಿ ಮೋದಿಯವರಿಗೆ ಗೊತ್ತಿದೆ. ಆದರೆ ಕಾಂಗ್ರೆಸ್ ನವರು ಮಹಿಳೆಯರನ್ನು
ಕೇವಲ ಮತ ಹಾಕುವ ವೋಟ್ ಬ್ಯಾಂಕ್ ಎಂದು ಭಾವಿಸಿ, ಅವರನ್ನು ಅಧಿಕಾರದಿಂದ ದೂರ ಇರಿಸುವ ಮನಸ್ಥಿತಿ ಹೊಂದಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸುವುದು ನಿಜವಾದ ಮಹಿಳಾ ಸಬಲೀಕರಣ. ನಾರಿಯರ ಶಕ್ತಿ ತಿಳಿಯದ ಅವರ ರಾಜಕೀಯ ಹಕ್ಕು ಕಸಿದ ರಾಹುಲ್ ಗಾಂಧಿ ನೇತೃತ್ವದ ನಾಯಕರಿಗೆ ಧಿಕ್ಕಾರ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಅಧಿಕಾರ ಬೇಕು ಎಂದು 27 ವರ್ಷಗಳಿಂದ ನಡೆದ ಹೋರಾಟಕ್ಕೆ ಪ್ರಧಾನಿ ಮೋದಿಯವರು ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಆದರೆ ಕಾಂಗ್ರೆಸ್ನವರು ಮಹಿಳಾ ಮೀಸಲಾತಿ ಮಸೂದೆ ತಿರಸ್ಕರಿಸಿ ಮಹಿಳೆಯರಿಗೆ ಅನ್ಯಾಯ, ಅವಮಾನ
ಮಾಡಿದರು. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ಕಾಂಗ್ರೆಸ್ಗೆ ಸರಿಯಾದ ಬುದ್ದಿ ಕಲಿಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್. ಸದಾಶಿವಯ್ಯ, ನಗರ ಅಧ್ಯಕ್ಷ ಟಿ.ಕೆ. ಧನುಷ್, ಯುವ ಮೋರ್ಚಾ ಜಿಲ್ಲಾದ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ. ವೇದಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಮುಖಂಡರಾದ ಬನಶಂಕರಿ ಬಾಬು, ಸತ್ಯಮಂಗಲ ಜಗದೀಶ್, ಹನುಮಂತರಾಜು, ಪ್ರೀತಂ ಜೈನ್, ನಿಸರ್ಗ ರಮೇಶ್, ಗಂಗಾಧರ್, ಅಂಜನಮೂರ್ತಿ, ರವಿ ಚೆಂಗಾವಿ, ವೆಂಕಟೇಶಾಚಾರ್, ಎ.ಸಿ. ಗಿರೀಶ್, ಆಟೋ ಯಡಿಯೂರಪ್ಪ, ರಾಧಾ ಗಂಗಾಧರ್, ಸಂಧ್ಯಾ, ರೇಣುಕಮ್ಮ, ಸಿದ್ದೇಶ್ವರ್, ಮಂಜುನಾಥ್, ಶಂಕರ್ ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








