ವಿಜಯ ದರ್ಪಣ ನ್ಯೂಸ್….
ಭಕ್ತರ ಸಮ್ಮುಖದಲ್ಲಿ ನಡೆದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ

ಕುಣಿಗಲ್: ತಾಲೂಕಿನ ಪ್ರಸಿದ್ದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಬುಧವಾರ ಸಹಸ್ರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಹಾರಥೋತ್ಸವ ಅಂಗವಾಗಿ ಸಿದ್ದಲಿಂಗೇಶ್ವರಸ್ವಾಮಿ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಹಾಗೂ ರಥಕ್ಕೆ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಅಭಿಜಿತ್ ಮುಹೂರ್ತದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಎಡೆಯೂರು ಬಾಳೆಹೊನ್ನೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ. ರಂಗನಾಥ್ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬುಧವಾರ ಬೆಳಗ್ಗೆ 11.30ಕ್ಕೆ ನಂದಿಧ್ವಜ ಪೂಜೆ ನೆರವೇರಿತು ಬಳಿಕ ನಂದಿ ಧ್ವಜವನ್ನು 8 ಲಕ್ಷ ರೂ.ಗಳಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯ ಜಯಕುಮಾರ್, ಕನ್ಯಾಕುಮಾರ್ ದಂಪತಿ ಹರಾಜು ಪಡೆದು ಪ್ರಥಮ ಪೂಜೆ ನೆರವೇರಿಸಿದರು.
ಕಲಾ ತಂಡ ಮೆರುಗು: ವೀರಗಾಸೆ ನೃತ್ಯ, ನಂದಿಧ್ವಜ ಕುಣಿತ, ಚಿಟ್ಟಿಮೇಳ ಕಲಾ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು ದೇವಾಲಯದ ಮುಂಭಾಗದ ರಥಬೀದಿಯಲ್ಲಿ ಭಕ್ತರಿಗೆ ಬಿಸಿಲಿನ ಬೇಗೆ ತಣಿಸಲು ಟ್ರ್ಯಾಕ್ಟರ್ ಗಳಿಂದ ನೀರು ಹಾಕುವ ಮೂಲಕ ರಥಬೀದಿ ತಂಪುಗೊಳಿಸಲಾಯಿತು. ರಸ್ತೆಯ ಪ್ರಮುಖ ಕಡೆಗಳಲ್ಲಿ ಅರವಂಟಿಗೆ ಸ್ಥಾಪಿಸಲಾಗಿತ್ತು.






