ವಿಜಯ ದರ್ಪಣ ನ್ಯೂಸ್….
ಉಳ್ಳವರು ನಿರಂತರವಾಗಿ ದಾನ-ಧರ್ಮಗಳ ಮೂಲಕ ಸಹಾಯ ಹಸ್ತ ಚಾಚುವುದು ಅಗತ್ಯವಿದೆ : ಉಮೇಶ್ ಕರಿಗಾರ

ಬ್ಯಾಡಗಿ : ಸಮಾಜದ ಒಳಿತಿಗಾಗಿ ಬಡವರ ಕಷ್ಟಗಳನ್ನು ಕಡಿಮೆ ಮಾಡಲು ಹಾಗೂ ದೇಗುಲಗಳ ಅಭಿವೃದ್ಧಿಗಾಗಿ ಉಳ್ಳವರು ನಿರಂತರವಾಗಿ ದಾನ-ಧರ್ಮಗಳ ಮೂಲಕ ಸಹಾಯ ಹಸ್ತ ಚಾಚುವುದು ಹಿಂದೆಂದಿಗಿಂತಲೂ ಈಗ ಅತ್ಯ ಅಗತ್ಯವಾಗಿದೆ ಎಂದು ಸಮಾಜ ಸೇವಕ ಉಮೇಶ್ ಕರಿಗಾರ ಹೇಳಿದರು. ಅವರು ಮಂಗಳವಾರ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಕಟ್ಟಡ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನ ಸ್ವಂತ ದುಡಿಮೆಯ ಪರಿಶ್ರಮದಿಂದ ಪ್ರಸಕ್ತ ವರ್ಷದಲ್ಲಿ ತಾಲೂಕಿನಾದ್ಯಂತ 15 ಕೋಟಿ ರೂ.ಗಳಿಗಿಂತಾ ಹೆಚ್ಚಿನ ಹಣ ಖರ್ಚು ಮಾಡುವ ಸದುದ್ದೇಶ ನನ್ನದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ನನ್ನದಾಗಿದೆ. ಈಗಾಗಲೇ ತಾಲೂಕಿನಲ್ಲಿಯ ಅನೇಕ ಗ್ರಾಮಗಳಲ್ಲಿಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ಸಹಾಯ ಸಲ್ಲಿಸಿದ್ದೇನೆ.
ಅದರಂತೆ ರಾಮಗೊಂಡನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶ್ರೀ ದುರ್ಗಾದೇವಿ ದೇವಾಲಯದ ಕಟ್ಟಡದ ಅಭಿವೃದ್ಧಿಗೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಜೊತೆಗೆ ದೇವಸ್ಥಾನದ ಕಟ್ಟಡಕ್ಕೆ ಹಣ ಕೊರತೆಯಾದಲ್ಲಿ ಹೆಚ್ಚಿನ ಹಣವನ್ನು ಕೊಡುವುದಾಗಿ ಭರವಸೆ ವ್ಯಕ್ತಪಡಿಸಿದ ಅವರು ಗ್ರಾಮೀಣ ಪ್ರದೇಶದ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲು ಜನತೆ ಮುಂದೆ ಬರುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಸರ್ಕಾರದಿಂದ ದುರ್ಗಾದೇವಿ ದೇವಾಲಯದ ಕಟ್ಟಡಕ್ಕೆ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದರು. ಗ್ರಾಮದ ಜನತೆಯೂ ಗ್ರಾಮದ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗೆ ಉಮೇಶ್ ಕರಿಗಾರ ಅವರು 10 ಲಕ್ಷ ರೂ.ಗಳ ದಾನ ಮಾಡಿದಂತೆ ಗ್ರಾಮದಲ್ಲಿಯ ಉಳ್ಳವರು ಜಾತ್ಯಾತೀತವಾಗಿ ದೇವಸ್ಥಾನದ ಕಟ್ಟಡಕ್ಕೆ ಆರ್ಥಿಕ ಸಹಾಯ ಮಾಡಲು ಮುಂದೆ ಬರುವಂತೆ ತಿಳಿಸಿದರಲ್ಲದೇ ಸಮಾಜದ ಏಳಿಗೆಗಾಗಿ 12 ನೇ ಶತಮಾನದಲ್ಲಿ ಬಸವಣ್ಣನವರು ಶ್ರಮಿಸಿದರು, ಕೇವಲ ಬೌದ್ಧಿಕವಲ್ಲದೆ, ಮನಸ್ಸಿನ ಸಮರ್ಪಣಾ ಭಾವದಿಂದ ದಾನ ಮಾಡಲು ಪ್ರೇರೇಪಿಸಿದ್ದರು ಎಂದರು. ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ನ್ಯಾಯವಾದಿ ಡಿ.ಎಚ್.ಬುಡ್ಡನಗೌಡ್ರ, ಚನ್ನಬಸಪ್ಪ ಹುಲ್ಲತ್ತಿ, ಚಿಕ್ಕಪ್ಪ ಹಾದಿಮನಿ, ನಾಗಪ್ಪ ಸೇರಿದಂತೆ ಇತರರಿದ್ದರು.





