ವಿಜಯ ದರ್ಪಣ ನ್ಯೂಸ್….
ಅಳಿಯನ ಹತ್ಯೆಗೆ ಸುಪಾರಿ: ಏಳು ಮಂದಿ ಬಂಧನ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ

: ತಾಂಡವಪುರ ಮೇ 25ಆಸ್ತಿ ವಿವಾದದ ಹಿನ್ನಲೆಯಲ್ಲಿ ಸೋದರ ಮಾವನೇ ಅಳಿಯನ ಕೊಲೆಗೆ ಸುಪಾರಿ ನೀಡಿದ್ದು, ಎರಡು ಬಾರಿಗೆ ಹತ್ಯೆಗೆ ಮುಂದಾಗಿದ್ದ ಪ್ರಕರಣವನ್ನು ಭೇದಿಸಿದ ಮೈಸೂರು ಜಿಲ್ಲಾ ಪೊಲೀಸರ ತಂಡ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು 37 ಲಕ್ಷ ರೂ. ಅನ್ನು ಸುಪಾರಿ ನೀಡಿದ್ದ ಸೋದರ ಮಾವ ಸೇರಿದಂತೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರು ಮಂದಿಯನ್ನು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸೋದರಳಿಯನ ಹತ್ಯೆಗೆ ಸುಪಾರಿ ನೀಡಿದ ಪಿರಿಯಾಪಟ್ಟಣದ ಬೆಟ್ಟದ ಪುರದ ರಾಜು ಅಲಿಯಸ್ ಸೌದೆ ರಾಜು ಸೇರಿ ಸುಪಾರಿ ಪಡೆದು ಕೊಲೆಗೆ ಯತ್ನಿಸಿದ ಸುಳ್ಯ ತಾಲೂಕಿನ ಕೆ.ಪಿ.ಶಫಿ, ಪಿರಿಯಾಪಟ್ಟಣದ ಮೀರ್ ಹುಸೇನ್ ಅಲಿ, ಹುಣಸೂರಿನ ನಯಾಜ್ ಅಹ್ಮದ್, ಮೈಸೂರಿನ ಹಬೀದ್ ಪಾಷ, ಅಯಾಜ್ ಪಾಷ, ಅಮೀನುಲ್ಲಾ ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮರದ ವ್ಯಾಪಾರಿಯಾಗಿದ್ದ ರಾಜು ತನ್ನ ತಂಗಿಯ ಮಗ ಪ್ರವೀಣ್ ಕುಮಾರ್ನ ಹತ್ಯೆಗೆ ಸುಪಾರಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ರಾಜು ಬಳಿ ಇರುವ ಆಸ್ತಿಯನ್ನು ತಮಗೂ ಪಾಲು ಬರಬೇಕೆಂದು ಪ್ರವೀಣ್ ಕುಮಾರ್ ಅವರು ತಾಯಿಯ ಪರವಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಆಸ್ತಿಯನ್ನು ಪಾಲು ಕೊಡಲು ಒಪ್ಪದ ರಾಜು ತಗಾದೆ ತೆಗೆದಿದ್ದ. ಆಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಬೇಕಾದರೆ ಆಸ್ತಿ ವಿಚಾರವಾಗಿ ಕ್ಯಾತೆ ತೆಗೆದಿರುವ ಪ್ರವೀಣ್ ಕುಮಾರ್ನನ್ನು ಕೊಲೆ ಮಾಡಿದರೆ ಆಸ್ತಿ ಉಳಿಯಲಿದೆ ಎಂದು ನಿರ್ಧರಿಸಿದ ರಾಜು, ವರ್ಷದ ಹಿಂದೆ 7 ಲಕ್ಷ ರೂ. ಸುಪಾರಿಯನ್ನು ಸುಳ್ಯದ ಶಫಿಗೆ ನೀಡಿ ಅಪಘಾತದ ಮೂಲಕ ಪ್ರವೀಣ್ ಕುಮಾರ್ ರನ್ನು ಕೊಲೆಗೆ ಯತ್ನಿಸಿದ್ದ. ಆದರೆ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪೊಲೀಸರು ಸಹ ಇದನ್ನು ರಸ್ತೆ ಅಪಘಾತವೇಂದೆ ನಂಬಿದ್ದರು.
ಇದಾದ ಬಳಿಕ ಕಳೆದ ಏಪ್ರಿಲ್ 13 ರಂದು ಪ್ರವೀಣ್ ಕುಮಾರ್ ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸಗಳಿಂದ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಅದೇ ಮಾರ್ಗದಲ್ಲಿ ವಾಹನ ಬಂದ ಪರಿಣಾಮ ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆ ಸಂಬಂಧ ಗಾಯಾಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು, ಪ್ರವೀಣ್ ಕುಮಾರ್ ಅವರ ಸೋದರ ಮಾವ ಸೌದೆ ರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ರಸ್ತೆ ಅಪಘಾತದ ಮೂಲಕ ಸಾಯಿಸಲು 7 ಲಕ್ಷರೂ. ಸುಪಾರಿ ನೀಡಿ ವಿಲನಾಗಿದ್ದ ಸೌದೆ ರಾಜು , ಮತ್ತೇ ಹೇಗಾದರೂ ಮಾಡಿ ಆಸ್ತಿ ಉಳಿಸಿಕೊಳ್ಳಲೇ ಬೇಕೆಂಬ ಉದ್ದೇಶದಿಂದ 30 ಲಕ್ಷ ರೂ. ನೀಡಿ ಮೈಸೂರಿನ ರೌಡಿ ಶೀಟರ್ಗಳನ್ನು ಸಂಪರ್ಕಿಸಿ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಆದರೆ ಎರಡನೇ ಪ್ರಯತ್ನದಲ್ಲಿಯೂ ಸಹ ವಿಫಲನಾಗುವ ಮೂಲಕ ಜೈಲು ಪಾಲಾಗಿದ್ದಾನೆ ಎಂದು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ಠಾಣೆ ಇನ್ಸ್ಪೆಕ್ಟರ್ ಎಂ.ವಿ.ಗೋವಿಂದ ರಾಜು, ಎಸ್ಐಗಳಾದ ಬಿ.ಎಚ್.ಜಗದೀಶ್, ಬೈಲಕುಪ್ಪೆ ಸರ್ಕಲ್ ಇನ್ಸ್ಪ್ಟೆರ್ ಎಂ.ಕೆ.ದೀಪಕ್, ಬೆಟ್ಟದಪುರ ಎಸ್ಐ ಡಿ.ಎನ್.ಅಜಯ್ ಕುಮಾರ್, ಎಸ್ಐ ರವಿಕುಮಾರ್, ಸಿಬ್ಬಂದಿಗಳಾದ ಲಿಂಗರಾಜಪ್ಪ, ಕೆ.ಎಚ್.ಮಧುಕುಮಾರ್, ರವೀಶ್, ಪ್ರಭಾಕರ್, ಎನ್.ಟಿ.ಮಹದೇವ, ಬಸವರಾಜು, ರುದ್ರೇಶ್, ಸುರೇಶ್, ಈರಣ್ಣ, ಪುನೀತ್, ಅಣ್ಣಯ್ಯ, ಮೋಹಿನ್ ಯಲಗೊಂಡ, ವಸಂತ್ ಕುಮಾರ್ ಇದ್ದರು.








