ವಿಜಯ ದರ್ಪಣ ನ್ಯೂಸ್….
ಹಿತ್ತಲಹಳ್ಳಿ ಗ್ರಾಮದಲ್ಲಿ 30 ವರ್ಷಗಳ ಬಳಿಕ ನಡೆದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ : ಗ್ರಾಮದಲ್ಲಿ 30 ವರ್ಷಗಳ ಬಳಿಕ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ ಹಾಗೂ ತಂಬಿಟ್ಟಿನ ದೀಪೋತ್ಸವ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನಡೆಯಿತು ,ಗ್ರಾಮದ ಊರಬಾಗಿಲಿನಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ದೇವಾಲಯಗಳಿಗೆ ತಲುಪಿ, ದೀಪ ಬೆಳಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ದೇವಿಯ ನಾಮಸ್ಮರಣೆ ಮಾಡಿದರು.
ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತಿ-ಬೇಧ ಮರೆತು ಒಗ್ಗಟ್ಟಿನಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾತ್ರೆಯ ಅಂಗವಾಗಿ ಗ್ರಾಮದ ಮುಖ್ಯ ದ್ವಾರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು,ಬಳಿಕ ಗ್ರಾಮದೇವತೆಗಳಾದ ಶ್ರೀಗಂಗಾದೇವಿ, ಶ್ರೀ ಮುನೇಶ್ವರಸ್ವಾಮಿ,ಶ್ರೀನರಸಿಂಹಸ್ವಾಮಿ,ಶ್ರೀ ಗೋಪಾಲಸ್ವಾಮಿ,ಶ್ರೀ ಅಂಡ್ಲಮ್ಮದೇವಿ, ಶ್ರೀ ಶನಿಮಹಾತ್ಮ, ಆಂಜನೇಯಸ್ವಾಮಿ, ಶ್ರೀ ಸಪ್ಪಲಮ್ಮ ದೇವಿ ಹಾಗೂ ಶ್ರೀ ನೆರೆಡಮ್ಮ ದೇವಿಯ ಸನ್ನಿಧಿಗಳಲ್ಲಿ ಅಭಿಷೇಕ, ಅಲಂಕಾರ, ಪೂಜೆ ಮತ್ತು ಮಹಾ ಮಂಗಳಾರತಿ ಸೇವೆಗಳು ನೆರವೇರಿದವು, ಭಕ್ತರು ವಿಶೇಷ ಹರಕೆ ಸಲ್ಲಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ತಂಬಿಟ್ಟಿನ ದೀಪೋತ್ಸವದಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆಯ ಮೇಲೆ ಹೊತ್ತು ತಮಟೆ ವಾದ್ಯಗಳೊಂದಿಗೆ ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಸಾಗಿದರು.
ಜಾತ್ರೆ ನಿಮಿತ್ತ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು , ಗ್ರಾಮದೇವತೆಗಳ ಉತ್ಸವಮೂರ್ತಿಗಳನ್ನು ಅಲಂಕರಿಸಿದ ವಾಹನಗಳಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು ,ತಮಟೆ ಹಾಗೂ ಮಂಗಳವಾದ್ಯಗಳ ನಾದಕ್ಕೆ ಯುವಕರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು ,ರಾತ್ರಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
ಜಾತ್ರೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು ,ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು, ಸ್ನೇಹಿತರು ಹಾಗೂ ಸಂಬಂಧಿಕರು ತೀರ್ಥಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದ ಪಡೆದರು.
ಹಿತ್ತಲಹಳ್ಳಿ ಗ್ರಾಮದಲ್ಲಿ 30 ವರ್ಷಗಳ ಬಳಿಕ ನಡೆದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತಿ-ಬೇಧ ಮರೆತು ಒಗ್ಗಟ್ಟಿನಿಂದ ಪಾಲ್ಗೊಂಡಿತು. ಸಂಪ್ರದಾಯದಂತೆ ಗ್ರಾಮದ ಕೆರೆಗೆ ತೆರಳಿ ಮಣ್ಣಿನಿಂದ ಗಂಗಮ್ಮನ ಮೂರ್ತಿ ನಿರ್ಮಿಸಿ, ಗುಡಿಕಟ್ಟಿ ಹೆಣ್ಣುಮಕ್ಕಳು ತಂಬಿಟ್ಟಿನ ದೀಪಗಳನ್ನು ಬೆಳಗಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು ಎಂದು ಗ್ರಾಮದ ಹಿರಿಯರಾದ ಎಚ್.ಜಿ. ಗೋಪಾಲಗೌಡ ಅವರು ತಿಳಿಸಿದರು.
ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್,ಎಚ್.ಎಂ.ರಾಮಪ್ಪ, ಲೋಕೇಶ್, ಬಿ.ಎಂ. ಮುನಿರಾಜು, ಜಿ. ಶ್ರೀನಿವಾಸ್, ಎ.ಕೆ. ಮಾರಪ್ಪ, ವಕೀಲ ಮುನಿರಾಜು,ಹೆಚ್.ಕೆ.ಸುರೇಶ್, ಉಗ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.









