ವಿಜಯ ದರ್ಪಣ ನ್ಯೂಸ್….
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ , ಸೆ.15:
ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕೇವಲ ಪುಸ್ತಕದಲ್ಲಿ ಅಥವಾ ಓದುಗೆ ಸೀಮಿತವಾಗಬಾರದು, ಪ್ರತಿ ಕ್ಷಣ, ಪ್ರತಿ ದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹೇಳಿದರು.
ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 2007ರ ಘೋಷಣೆಯಂತೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಘೋಷಣೆಯ ಪ್ರಕಾರ ಪ್ರಜಾಪ್ರಭುತ್ವವು ಒಂದು ದಿನದಲ್ಲಿ ಲಭಿಸುವ ಉಡುಗೊರೆಯಲ್ಲ, ಅದನ್ನು ಪ್ರತಿ ದಿನ ರಕ್ಷಿಸಿಕೊಳ್ಳಬೇಕಾಗಿದೆ. ಹೀಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವಿಷಯದ ಮೇಲೆ ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ಯುವ ಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಪ್ರಜೆಗಳೇ ಪ್ರಭುಗಳು ಎಂಬುದನ್ನು ನೆನಪಿಸುತ್ತಾ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಪ್ರತಿಜ್ಞೆಯೊಂದಿಗೆ ಕರ್ನಾಟಕ ಸರ್ಕಾರದ ವತಿಯಿಂದ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ.
ಸಂವಿಧಾನ ನಮಗೆ ನೀಡಿರುವ ಅವಕಾಶಗಳಿಂದ ನಾವು ಹಾಗೂ ನಮ್ಮ ಕುಟುಂಬದ ಚಿತ್ರಣವನ್ನು ಬದಲಾಯಿಸಲು ಸಾಧ್ಯ. ವಿದ್ಯಾರ್ಥಿಗಳು ಸಂವಿಧಾನದ ಕಾನೂನು, ಹಕ್ಕುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದು ಒಳ್ಳೆಯ ವಿದ್ಯಾಭ್ಯಾಸ ಪಡೆಯುವ ಮೂಲಕ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಬೇಕು. ಇದರಿಂದ ನಿಮ್ಮ ಹಾಗೂ ಕುಟುಂಬದ ಗೌರವ ಹೆಚ್ಚಾಗಲಿದೆ. ಜೊತೆಗೆ ಬದುಕು ಸಾಕಾರವಾಗಲಿದೆ ಎಂದು ಡಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಭಾರತ ಸಂವಿಧಾನದ ನಾಲ್ಕು ಮೂಲಭೂತ ತತ್ವಗಳಾದ ನ್ಯಾಯ (Justice) ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನ ನ್ಯಾಯ ಸಿಗುವುದು. ಎರಡನೆಯದು ಸ್ವಾತಂತ್ರ್ಯ (Liberty)
ಪ್ರತಿಯೊಬ್ಬರಿಗೂ ಆಲೋಚನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಉಪಾಸನೆ ಮಾಡುವ ಸ್ವಾತಂತ್ರ್ಯ ಇದೆ. ಮೂರನೆಯದು ಸಮಾನತೆ (Equality) ಕಾನೂನಿನ ಮುಂದೆ ಎಲ್ಲರೂ ಸಮಾನ. ಸ್ಥಾನಮಾನ, ಅವಕಾಶದಲ್ಲಿ ಸಮಾನತೆ. ಯಾವುದೇ ವ್ಯಕ್ತಿಗೆ ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ನಾಲ್ಕನೆಯದು ಭ್ರಾತೃತ್ವ (Fraternity) ನಾವೆಲ್ಲರೂ ಭಾರತೀಯರು ಎಂಬ ಸಹೋದರ ಭಾವನೆ. ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ, ಅಖಂಡತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಈ ಎಲ್ಲಾ ಸಂವಿಧಾನದ ಅವಕಾಶಗಳಿಂದ ನಾವೆಲ್ಲರೂ ಈ ಸ್ಥಾನದಲ್ಲಿ ನಿಂತಿದ್ದೇವೆ. ಸಂವಿಧಾನವು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾದದ್ದು ಅಲ್ಲ, ಸಂವಿಧಾನದ ಪ್ರತಿಯೋಬ್ಬರ ಹಕ್ಕು. ಎಲ್ಲರಿಂದ, ಎಲ್ಲರಿಗಾಗಿ, ಎಲ್ಲರಿಗೊಸ್ಕರ ಪ್ರಜಾಪ್ರಭುತ್ವ ಇರುವುದು. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಾವು, ನೀವೆಲ್ಲರೂ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯುವ ಸಂಸತ್ತು ಸಭೆಗೆ ಚಾಲನೆ
ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಮತ್ತು ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ಇಂದು “ಯುವ ಸಂಸತ್ತು” ಸಭೆಗೆ ಚಾಲನೆ ನೀಡಲಾಗಿದೆ..

ಭಾರತದ ಯುವ ಸಂಸತ್ತು ವ್ಯವಸ್ಥೆಯ ಒಂದು ಪ್ರಮುಖ ಭಾಗವಾದ ವಿಧಾನ ಸಭೆಯ ಮಾದರಿಯಲ್ಲಿ ಯುವ ಸಂಸತ್ತು ಸಭೆ ಆಯೋಜಿಸಲಾಗುವುದು. ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 10 ರೊಳಗೆ ತಾಲ್ಲೂಕು ಮಟ್ಟದ ಸಭೆ ಆಯೋಜಿಸಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಂಸತ್ತು ಸಭೆ ಕಾರ್ಯಕ್ರಮ ಆಯೋಜಿಸಲಾಗುವೀದು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಈ ಸಂಸತ್ತು ಸಭೆಯಲ್ಲಿ ಭಾಗವಹಿಸುವರು.
ನಿರ್ದಿಷ್ಟ ಸ್ಥಳವನ್ನು ಗುರುತಿಸಿ ವಿಧಾನಸಭಾ ಕಾರ್ಯಕಲಾಪಗಳ ಮಾದರಿಯಲ್ಲಿ ಈ ಸಭೆ ನಡೆಯಲಿದ್ದು ನಂತರ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ, ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ವಾಸಂತಿ ಅಮರ್ ಅವರು ಭಾರತ ಸಂವಿಧಾನ ಪೀಠಿಕೆ ಬೋಧಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರು ಮಾತನಾಡಿ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಮುಖ ಉದ್ದೇಶವೆಂದರೆ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಸ್ಥಿತಿಗತಿಗಳನ್ನು ಅವಲೋಕಿಸುವುದು, ಸಮಾಜದಲ್ಲಿಕ ಶಾಂತಿ, ಸೌಹಾರ್ದತೆ ಮತ್ತು ಆಂತರಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುವುದು. ಪ್ರಜಾಪ್ರಭುತ್ವವೆಂದರೆ ಕೇವಲ ಮತದಾನವಲ್ಲ, ಅದೊಂದು ಚಿಂತನೆ, ಕಾರ್ಯವಿಧಾನ ಮತ್ತು ಪರಸ್ಪರ ಗೌರವದ ಬದುಕು ಎಂದು ತಿಳಿಸಿದರು.
ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಪ್ರತಿ ಪ್ರಜೆಗೆ ಮತದಾನದ ಹಕ್ಕು, ಸಮಾನ ಅವಕಾಶಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯ, ಭಾರತೀಯ ಪ್ರಜಾಪ್ರಭುತ್ವದ ಮುಖ್ಯ ಆಧಾರ ಸ್ಥಂಭಗಳಾಗಿವೆ ಎಂದರು.
ಇಂದು ಯುವಜನಾಂಗ ತಮ್ಮ ಸಮಾಜದಲ್ಲಿ ಹೆಚ್ಚು ಹೆಚ್ಚು ನ್ಯಾಯಯುತ ಅವಕಾಶಗಳನ್ನು ಬಯಸುತ್ತಿರುವುದರಿಂದ, ಅವರು ಎದುರಿಸುತ್ತಿರುವ ಬಹು ಸವಾಲುಗಳನ್ನು ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಲಿಂಗ ಸಮಾನತೆಯಂತಹ ಸಮಸ್ಯೆಗಳನ್ನು ಪರಿಹರಿಸುವುದು ಇಂದಿನ ತುರ್ತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ಸಿಇಒ ಡಾ. ವಾಸಂತಿ ಅಮರ್, ಎಸ್ಪಿ ಚಂದ್ರಕಾಂತ ಎಂ.ವಿ, ಎಸಿ ಮಂಜುನಾಥ್, ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರೇಮಾ, ದೇವನಹಳ್ಳಿ ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತೋಟಗಾರಿಕೆ:ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂ.02:
ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಮೂಲಕ ದ್ರಾಕ್ಷಿ, ಬಾಳೆ,ದಾಳಿಂಬೆ, ಸೀಬೆ, ಹೈಬ್ರಿಡ್ ತರಕಾರಿ, ಮಾವು, ಕಾಳು ಮೆಣಸು ಮತ್ತು ಹೂ ಬೆಳೆ ವಿಸ್ತರಣೆ, ವೈಯುಕ್ತಿಕ ಕೃಷಿ ಹೊಂಡ, ಸಮಗ್ರ ಪ್ಯಾಕ್ ಹೌಸ್, ಸೋಲಾರ್ ಕ್ರಾಪ್ ಡ್ರೈಯರ್, ಹೈಡ್ರೋಪೋನಿಕ್ಸ್, ಎರೆಹುಳು ಗೊಬ್ಬರ ಘಟಕ, ಕಡಿಮೆ ವೆಚ್ಚದ ಅಣಬೆ ಉತ್ಪಾದನಾ ಘಟಕಗಳಿಗೆ ಫಲಾನುಭವಿಗಳು ಸಹಾಯಧನವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದ್ದು ಆಸಕ್ತ ರೈತರು ಅರ್ಜಿ ಸಮೇತ ಅಗತ್ಯವಾದ ದಾಖಲೆಗಳನ್ನು ಸಂಬಂಧಪಟ್ಟ ತಾಲೂಕುಗಳ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ದೇವನಹಳ್ಳಿ-9480461234, ಹೊಸಕೋಟೆ-9880210892, ದೊಡ್ಡಬಳ್ಳಾಪುರ-9482129648, ನೆಲಮಂಗಲ-9902581832
ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ-9448999214 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









