ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ:ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್
ವಿಜಯ ದರ್ಪಣ ನ್ಯೂಸ್…..
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ:ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜೂ.13: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತದಾನದಿಂದ ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಬಹುದು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ್ದು ಎಲ್ಲಾ ವರ್ಗದವರಿಗೂ ಮತದಾನ ಮಾಡುವ ಸಾಮಾನ ಹಕ್ಕು ನೀಡಲಾಗಿದೆ. ಹಾಗಾಗಿ ಅರ್ಹ ಮತದಾರರು ಯಾರು ಕೂಡ ಮತದಾನದಿಂದ ವಂಚಿತರಾಗಬಾರದು.
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ(ಸ್ವೀಪ್) ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.
ಮತದಾನ ಪ್ರಕ್ರಿಯೆಯಲ್ಲಿ ಮೂರು ಮೂಖ್ಯ ಅಂಶಗಳು ಗಮನದಲ್ಲಿರಿಸಿ ಮತದಾರರ ಗುರುತಿನ ಚೀಟಿ ಮಾಡಿಸಲು ನೋಂದಣಿ ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ದಾಖಲೆ ಸರಿಯಾಗಿದೆಯೇ, ವಿಳಾಸ, ವಯಸ್ಸು, ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಪರಿಶೀಲಿಸಬೇಕು. ಎರಡನೇಯದಾಗಿ ಮತದಾನಕ್ಕೆ ಬಳಸುವ ಇವಿಎಂ ಮಿಷನ್ ಗಳ ಬಗ್ಗೆ ಹಲವರು ವಿಭಿನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹೇಳುವರು. ಅಂತಹ ಅಭಿಪ್ರಾಯಗಳಿಗೆ ಉತ್ತರಿಸುವ, ವಿವರಿಸುವ ಮಾಹಿತಿ ಅಧಿಕಾರಿಗಳಲ್ಲಿ ಇರಬೇಕು. ಮೂರನೆಯದಾಗಿ ಸಹಾಯವಾಣಿ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಗುರುತಿನ ಚೀಟಿಯ ತಿದ್ದುಪಡಿ, ಹೊಸ ಕಾರ್ಡ್ ಪಡೆಯುವುದು ಹಾಗೂ ಇನ್ನಿತರೆ ಮತದಾನಕ್ಕೆ ಸಂಬಂಧಿಸಿದ ದೂರು, ಸಲಹೆಗಳಿಗೆ 1950 ಸಂಖ್ಯೆ ಸಂಪರ್ಕಿಸುವುದು. ಇವುಗಳ ಬಗ್ಗೆ ಅಧಿಕಾರಿಗಳು ತಿಳಿದಿರಬೇಕು.
ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗೆ ರ್ಯಾಂಪ್ ಸೇರಿದಂತೆ ಸುಸಜ್ಜಿತ ಮೂಲಭೂತ ಸೌಕರ್ಯ ಇರುವುದನ್ನು ಖಚಿತ ಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ.ಪಂ ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಧರ್ತಿ ಆಬಾ ಅಭಿಯಾನದಡಿ 14 ಗ್ರಾಮಗಳ ಆಯ್ಕೆ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ .ಜೂನ್13: ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ನವದೆಹಲಿ ರವರು ಜನ್ ಜಾತಿಯ ಗೌರವ್ ವರ್ಷದ ಅಂಗವಾಗಿ ಧರ್ತಿ ಅಭಾ ಜನ್ ಜಾತೀಯ ಉತ್ಕರ್ಷ ಅಭಿಯಾನ ಕೈಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ.
ಧರ್ತಿ ಅಭಾ ಜನ್ ಜಾತೀಯ ಉತ್ಕರ್ಷ ಅಭಿಯಾನದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ. ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಯುಷ್ಮಾನ್ ಭಾರತ್ ಕಾರ್ಡ್. ಜನದನ್ ಬ್ಯಾಂಕ್ ಖಾತೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಕಿಸಾನ್ ಕ್ರೇಡಿಟ್ ಕಾರ್ಡ್, ಪಿ.ಎಂ.ಕಿಸಾನ್, ಎಮ್.ಜಿ.ನರೇಗಾ, ವೃದ್ದಾಪ್ಯ ವೇತನಾ. ಪಿ.ಎಂ.ವಿಶ್ವರ್ಮ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ. ವಿಕಲಾಂಗ ವೇತನಾ, ವಿಧವಾ ವೇತನಾ. ಮುದ್ರಾ ಯೋಜನೆ, ಖಾಯಂ ನಿವಾಸಿ ದೃಢೀಕರಣ ಪತ್ರ ಮುಂತಾದ ದಾಖಲಾತಿಗಳನ್ನು 14 ಗ್ರಾಮಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಮಾಡಿಕೊಡಲಾಗುವುದು.
ಆಯ್ಕೆಯಾಗಿರುವ 14 ಗ್ರಾಮಗಳು
ದೇವನಹಳ್ಳಿ ತಾಲ್ಲೂಕಿನ ಹೊಲೇರಹಳ್ಳಿ, ವೆಂಕಟೇನಹಳ್ಳಿ, ಚಿಕ್ಕ ತತ್ತಮಂಗಲ, ಕೆಂಪೇನಹಳ್ಳಿ, ಯರ್ತಿಗಾನಹಳ್ಳಿ, ಭುವನಹಳ್ಳಿ ರಾಯಸಂದ್ರ, ಬಮ್ಮನಹಳ್ಳಿ, ಜೊನ್ನಹಳ್ಳಿ, ಕೊಂಡೆನಹಳ್ಳಿ. ದೊಡ್ಡಬಳ್ಳಾಪುರ ತಾಲ್ಲೂಕಿನ ಗುಮ್ಮನಹಳ್ಳಿ, ಬೊಮ್ಮನಹಳ್ಳಿ. ಹೊಸಕೋಟೆ ತಾಲ್ಲೂಕಿನ ವಲಗೇರೆಪುರ.
ಶಿಬಿರವು ಜೂನ್ 15 ರಿಂದ 30 ರ ವರೆಗೆ ಆಯೋಜನೆ ಮಾಡಲಾಗಿದ್ದು 14 ಗ್ರಾಮಗಳಲ್ಲಿನ ಎಲ್ಲಾ ಬುಡಕಟ್ಟು ಜನಾಂಗದವರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ರವರನ್ನು, 080-29787448, ದೇವನಹಳ್ಳಿ 080-27681784, ದೊಡ್ಡಬಳ್ಳಾಪುರ-080-27629681 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.