ವಿಜಯ ದರ್ಪಣ ನ್ಯೂಸ್….
ಗುರುಪೂರ್ಣಮಿ ಅಂಗವಾಗಿ ಗುರು ವಂದನೆ: ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ಕಾರ್ಯಕ್ರಮ
ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ದಿವ್ಯಶಕ್ತಿ ಗುರು : ವೀರಬ್ರಹ್ಮಚಾರ್ ಗುರೂಜೀ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 19ನೇ ವರ್ಷದ ಗುರುಪೂರ್ಣಮಿ ಮಹೋತ್ಸವ, ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಹಾಗೂ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಡಾ. ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿಗಳಿಗೆ ಭಕ್ತರಿಂದ ಗುರು ವಂದನಾ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಸತ್ಯನಾರಾಯಣ ಸ್ವಾಮಿಗೆ ವಿಶೇಷ ಪೂಜೆ, ವ್ರತ, ಹೋಮ-ಹವನ ಹಾಗೂ ಧಾರ್ಮಿಕ ವಿಧಿವಿಧಾನಗಳು ವೈದಿಕ ಸಂಪ್ರದಾಯದಂತೆ ನಡೆದವು. ನೂರಾರು ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಗುರೂಜಿಗಳಿಗೆ ಪುಷ್ಪಾರ್ಚನೆ, ಫಲ-ಪುಷ್ಪ ಸಮರ್ಪಣೆ ಹಾಗೂ ಶಾಲು ಹೊದಿಸಿ ಭಕ್ತರು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಡಾ. ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿಗಳು ಗುರು ಎಂದರೆ ಕೇವಲ ವ್ಯಕ್ತಿಯಲ್ಲ, ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ದಿವ್ಯಶಕ್ತಿ ಎಂದು ತಿಳಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದ್ದು, ಗುರುಗಳ ಆಶೀರ್ವಾದದಿಂದ ಜೀವನದಲ್ಲಿ ಸುಖ, ಶಾಂತಿ, ಯಶಸ್ಸು ಮತ್ತು ಆಧ್ಯಾತ್ಮಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಸತ್ಯ, ಧರ್ಮ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಆಚರಣೆಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಕುಟುಂಬದಲ್ಲಿ ಐಕ್ಯತೆ, ಶಾಂತಿ ಹಾಗೂ ಸಮೃದ್ಧಿಯನ್ನು ತರಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುದಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ ಮಾತನಾಡಿ, ಡಾ. ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿಗಳು ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸೇವೆಗಳ ಮೂಲಕ ಸಾವಿರಾರು ಭಕ್ತರ ಜೀವನದಲ್ಲಿ ಆಶಾಕಿರಣವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರ ಮಾರ್ಗದರ್ಶನದಿಂದ ಅನೇಕ ಕುಟುಂಬಗಳು ನೆಮ್ಮದಿ ಕಂಡಿದ್ದು, ಭಕ್ತರ ನಂಬಿಕೆ ಹಾಗೂ ವಿಶ್ವಾಸಕ್ಕೆ ಗುರೂಜಿಗಳ ಸೇವೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಇಂತಹ ಗುರುಗಳ ಆಶೀರ್ವಾದವನ್ನು ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಕೃಷ್ಣಾರೆಡ್ಡಿ, ವೆಂಕಟಾಪುರ ನಾಗೇಶ್, ಶ್ರೀನಿವಾಸಚಾರಿ, ನಂಜುಂಡಚಾರ್, ಸಂದೀಪಆಚಾರ್, ಅಭಿಲಾಶ್, ಶಶಿಕುಮಾರ್ ,ಹರೀಶ್, ಪ್ರಭಾಕರಚಾರಿ ಸುರೇಶಚಾರಿ, ಪ್ರಕಾಶ್, ಧನುಷ್ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಗುರುಪೂರ್ಣಮಿ ಹಾಗೂ ಗುರು ವಂದನಾ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು.










