ಹೋಟೆಲ್ ಹಾಗೂ ರೆಸ್ಟೋರೆಂಟ್ ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಅಂದೋಲನ

ವಿಜಯ ದರ್ಪಣ ನ್ಯೂಸ್….

ಹೋಟೆಲ್ ಹಾಗೂ ರೆಸ್ಟೋರೆಂಟ್ ಆಹಾರ ಉದ್ದಿಮೆಗಳ ಪರಿಶೀಲನೆ ವಿಶೇಷ ಅಂದೋಲನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿಗಳು ಇಂದು ದೇವನಹಳ್ಳಿ, ಹೊಸಕೋಟಿ, ನೆಲಮಂಗಲ, ದೊಡ್ಡಬಳ್ಳಾಪುರ, ಸ್ಥಳಗಳಲ್ಲಿ ಇರುವ ಒಟ್ಟು 23 ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ 4 ನೋಟಿಸ್‌ ನೀಡಲಾಗಿದ್ದು 10000 ರೂ ದಂಡ ವಿಧಿಸಲಾಗಿದೆ. ಹಾಗೆ 4 ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆಹಾರ ಉದ್ದಿಮೆದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಿದರು.

ಆಹಾರ ಉದ್ದಿಮೆ ಸ್ಥಳದಲ್ಲಿ ಪರಿಸರ ನೈರ್ಮಲ್ಯವಾಗಿರಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ಕುಡಿಯುವ ನೀರಿನ ಪರಿಶೀಲನೆ ಮಾಡಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂದು ಸೂಚನೆ ನೀಡಿ, ಕರಪತ್ರ ವಿತರಿಸಿ, ಅರಿವು ಮೂಡಿಸಿದರು. ಈ ವಿಶೇಷ ಅಂದೋಲನದಲ್ಲಿ ಆಹಾರ ಸುರಕ್ಷತೆಯ ಅಂಕಿತಾಧಿಕಾರಿ ಡಾ. ಧರ್ಮೇಂದ್ರ.ಬಿ, ಹಾಗೂ ಆಹಾರ ಸುರಕ್ಷತಾಧಿಕಾರಿಗಳಾದ ಗೋವಿಂದರಾಜು, ನಾಗೇಶ, ಪ್ರವೀಣ್ ಭಾಗವಹಿಸಿದ್ದರು.