ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಅವರ ಸದಸ್ಯತ್ವ ರದ್ದುಗೊಳಿಸಬೇಕು: ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್
ವಿಜಯ ದರ್ಪಣ ನ್ಯೂಸ್…
ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಅವರ ಸದಸ್ಯತ್ವ ರದ್ದುಗೊಳಿಸಬೇಕು: ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್
ವಿಜಯಪುರ ದೇವನಹಳ್ಳಿ ತಾಲ್ಲೂಕು : ಪಟ್ಟಣದ 18ನೇ ವಾರ್ಡಿನ ಪುರಸಭೆ ಸದಸ್ಯ ಎ.ಆರ್. ಹನೀವುಲ್ಲಾ ಅವರ ಮೇಲೆ ಕೊಲೆಗೆ ಪ್ರಚೋದನೆಯ ಆರೋಪದಡಿಯಲ್ಲಿ ವಿಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದರ ಜೊತೆಗೆ, ಅವರ ಮೇಲೆ ಕೊಲೆಗೆ ಯತ್ನ ನಡೆಸಿರುವ ಪ್ರಕರಣವೊಂದರಲ್ಲಿ ವಾರೆಂಟ್ ಇದೆ ಈ ಕಾರಣದಿಂದ ಅವರ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ದ್ವಿತೀಯ ದರ್ಜೆ ನೌಕರ ಪವನ್ ಜೋಶಿ ಅವರಿಗೆ ನಕಲಿ ದಾಖಲೆಗಳನ್ನು ಕೊಟ್ಟು, ಅಕ್ರಮ ಖಾತೆ ಮಾಡುವಂತೆ ಪದೇ ಪದೇ ಒತ್ತಡ ಹೇರಿರುವುದರ ಪರಿಣಾಮವಾಗಿ, ನೌಕರ ಸಾವಿಗೀಡಾಗಿದ್ದಾನೆ ಎಂದು ಮೃತನ ಪತ್ನಿ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಚೋದನೆಯ ಆರೋಪದಡಿ ದೂರು ದಾಖಲಾಗಿದ್ದರೂ, ಪೊಲೀಸರು ಇದುವರೆಗೂ ಅವರನ್ನು ಬಂಧಿಸಿಲ್ಲ.
ಪುರಸಭೆಯ ನೌಕರನ ಕೈಯಿಂದ ದಾಖಲೆಗಳನ್ನು ಕಸಿದುಕೊಂಡು ಹೋಗಿರುವ ಆರೋಪದಡಿಯಲ್ಲಿ, ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಮಂಜುನಾಥ್ ಅವರು ದೂರು ನೀಡಿದ್ದರು. ಪುರಸಭೆ ಸದಸ್ಯ ಹನೀಪುಲ್ಲಾ ಅವರ ಸಹೋದರಿ ಪುರಸಭೆ ಸದಸ್ಯೆಯಾಗಿದ್ದಾಗ, ಅವರ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಸೌಲಭ್ಯಗಳನ್ನು ಮಾಡಿಕೊಂಡಿದ್ದಾರೆ. ಚನ್ನರಾಯಪಟ್ಟಣ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿರುವ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ವಾರಂಟ್ ಆಗಿದೆ. ಈ ಪ್ರಕರಣ ವಿಚಾರಣೆಯಲ್ಲಿದೆ.
ಕ್ರಯದ ಕರಾರು ಪತ್ರಗಳನ್ನು ತಿದ್ದಿ, ಕರಾರು ಪತ್ರವೆಂದು ಮಾಡಿ, ಖಾತೆಗಳು ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವಂತಹ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಇವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳು, ಕೂಡಲೇ ವಜಾಗೊಳಿಸಬೇಕು. ಇವರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರ ಮಕ್ಕಳು ಯಾರೂ ಈ ಶಾಲೆಯಲ್ಲಿ ಓದುತ್ತಿಲ್ಲವಾದ್ದರಿಂದ ಇವರನ್ನು ಅನಧಿಕೃತವಾಗಿ ನೇಮಕ ಮಾಡಿದ್ದಾರೆ. ಕೂಡಲೇ ವಜಾಗೊಳಿಸಬೇಕು. ವಕ್ಸ್ ಬೋರ್ಡ್ ನಿಂದ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಈ ಹುದ್ದೆಯಿಂದಲೂ ಇವರನ್ನು ವಜಾಗೊಳಿಸಬೇಕು.
ಇವರ ಮೇಲೆ ವಾರೆಂಟ್ ಇರುವುದರಿಂದ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಬೇಕು. ಒಂದು ವೇಳೆ ಇವರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ’ ಎಂದರು. ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವ, ಮುನಿವೆಂಕಟಸ್ವಾಮಿ, ಸಮಿತಿಯ ನಿರ್ದೇಶಕರಾದ ಜಿ.ಎಂ.ಶಿವಣ್ಣ, ಮಂಜುನಾಥ್, ವಕೀಲ ಬಾಲರಾಜ್, ಸೈಯದ್ ನಿಜಾಮುದ್ದೀನ್. ಮುಂತಾದವರು ಹಾಜರಿದ್ದರು.