ಸಕಾಲದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು: ನ್ಯಾ. ಜಿತೇಂದ್ರ ಕುಮಾರ್ ಮಹೇಶ್ವರಿ
ವಿಜಯ ದರ್ಪಣ ನ್ಯೂಸ್….
ನ್ಯಾಯ ಎನ್ನುವುದು ಸಂಘರ್ಷ ಅಲ್ಲ ಬದಲಾಗಿ ಜನಸಾಮಾನ್ಯರಿಗೆ ಸೇವೆ ಒಗಿಸುವುದೇ ನ್ಯಾಯ
ಸಕಾಲದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು: ನ್ಯಾ. ಜಿತೇಂದ್ರ ಕುಮಾರ್ ಮಹೇಶ್ವರಿ
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅ.23
ಬಡವರು, ಹಿಂದುಳಿದವರು, ಮಕ್ಕಳು ಮಹಿಳೆಯರು ಸೇರಿದಂತೆ ಪ್ರತಿಯೋಬ್ಬರಿಗೂ ಸಕಾಲದಲ್ಲಿ ಸಾಮಾನ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೀತೇಂದ್ರ ಕುಮಾರ್ ಮಹೇಶ್ವರಿ ಅವರು ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವತಿಯಿಂದ ಆಕಾಶ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ದೇವನಹಳ್ಳಿ ತಾಲ್ಲೂಕಿನ ಆಕಾಶ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾವಿನ್ಯತಾ ಪರಿಹಾರ ಕ್ರಮಗಳು ಕುರಿತ ಕಾನೂನು ಸಾಕ್ಷರತಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರೀಕರು ಕಾನೂನಿನ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು, ಕಾನೂನು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ನ್ಯಾಯಾಲಯವು ಪ್ರತಿಯೋಬ್ಬರಿಗೆ ನ್ಯಾಯ ಒದಗಿಸಲಿದೆ. ಹಾಗಾಗಿ ಎಲ್ಲರಿಗೂ ಕಾನೂನು ಅರಿವು ಮುಖ್ಯ.
ಸಾಮಾಜಿಕ ನ್ಯಾಯದ ಬಗ್ಗೆ ಅರಿವಿರಲಿ
ನ್ಯಾಯಾಲಯವು ಸಾರ್ವಜನಿಕರು ನೀಡುವ ದೂರುಗಳಿಗೆ ಸೂಕ್ತ ನ್ಯಾಯ ಒದಗಿಸುತ್ತದೆ. ಹಾಗೆಯೇ ಜನಸಾಮಾನ್ಯರು ಕೂಡ ತಮ್ಮ ಸಾಮಾಜಿಕ ನ್ಯಾಯ, ಜವಾಬ್ದಾರಿ ಬಗ್ಗೆ ತಿಳಿದಿರಬೇಕು. ಅಸಮಾನತೆ ಹೋಗಲಾಡಿಸುವುದು, ವೈವಿದ್ಯತೆ ಕಾಪಾಡುವುದು, ಸಮಾನ ಅವಕಾಶ ಕಲ್ಪಿಸುವುದು, ಹಕ್ಕುಗಳ ರಕ್ಷಣೆ ನಮ್ಮ ಜವಾಬ್ದಾರಿ ಆಗಿದೆ. ಇವುಗಳನ್ನು ಅರಿತು ಸಮಾಜದಲ್ಲಿ ನಾವು ಜೀವನ ನಡೆಸಬೇಕು ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ವಿನೂತನ ಆವಿಷ್ಕಾರಗಳನ್ನು ಮಾಡುವ ಮೂಲಕ ಜನತೆಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೂರು ಲಕ್ಷ ಆದಾಯಾಕ್ಕಿಂತ ಕಡಿಮೆ ಇದ್ದರೆ ಅಂತಹವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಉಚಿತ ಕಾನೂನಿನ ನೆರವನ್ನು ನೀಡಲಾಗುತ್ತದೆ ಎಂದರು. ಶಿಕ್ಷಣದಿಂದ ಎಲ್ಲಾ ರೀತಿಯ ಕಾನೂನು ಅರಿವು ಪಡೆಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವಾನ್ವಿತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಮಾತನಾಡಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕ ಶೈಲಿ, ಹೊಸ ನಾವೀನ್ಯತೆ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಲೋಕಾದಲತ್ ಜಾರಿಗೆ ತರಲಾಯಿತು. ಅಂದರೆ ಪ್ರಕರಣಗಳ ವಿಲೇವಾರಿಯನ್ನು ದೂರುದಾರರ ಮನೆಯಿಂದಲೇ ನಡೆಸಿ ಸುಮಾರು 1.59 ಲಕ್ಷ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ ಎಂದರು. ದೇಶದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ ಸಾರ್ವಜನಿಕರಿಗೆ ಕಾನೂನು ಹಕ್ಕುಗಳ ಅರಿವು ಅಗತ್ಯವಿದೆ. ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಗೌರವಾನ್ವಿತ ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಕರ್ನಾಟಕದ ಹೈಕೋರ್ಟ್ ರಿಜಿಸ್ಟರ್ ಜನರಲ್ ಕೆ.ಎಸ್ ಭರತ್ ಕುಮಾರ್, ಜಿಲ್ಲಾಧಿಕಾರಿ ಎಬಿ ಬಸವರಾಜು, ಎಸ್ಪಿ ಸಿಕೆ ಬಾಬಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಶೈಲ ಭೀಮಸೇನ ಬಗಾಡಿ ಅವರು, ಇತರೆ ಗಣ್ಯರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.